Wednesday, August 5, 2020

ಕ್ಯಾಪರ್ನೌಮ್

ಕ್ಯಾಪರ್ನೌಮ್

ಬೀರತ್ ನಲ್ಲಿ ನಿನ್ನೆ ಸಂಭವಿಸಿದ ದೊಡ್ಡ ಸ್ಫೋಟದಿಂದಾಗಿ ಈ ಲೆಬನೀಸ್ ಸಿನಿಮಾ ಮತ್ತೆ ನೆನಪಿಗೆ ಬಂತು. 2018ರಲ್ಲಿ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನ ಕಂಡು, ನಂತರ ಹಲವಾರು ಚಿತ್ರೋತ್ಸವಗಳಲ್ಲಿ ಅಪಾರ ಮೆಚ್ಚುಗೆಯ ಜೊತೆ ಪ್ರಶಸ್ತಿ ಬಾಚಿಕೊಂಡ ಚಿತ್ರ ಇದು, ಜೊತೆಗೆ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಕಮರ್ಷಿಯಲ್ ಆಗಿಯೂ ಯಶಸ್ವಿಯಾದ ಚಿತ್ರ.

ಲೆಬನಾನ್ ರಾಜಧಾನಿ ಬೀರತ್ ನ ಸ್ಲಮ್ ಒಂದರ ಹುಡುಗನ ಹೋರಾಟದ ಕತೆ ಇದು. ತನ್ನ ಹೆತ್ತವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೋರಿ ಝೈನ್ ಕೋರ್ಟ್ ಮೆಟ್ಚಿಲು ಹತ್ತುವುದರ ಮೂಲಕ ಸಿನಿಮಾ ಆರಂಭವಾಗುತ್ತದೆ. ಆತನ ಪ್ರಕಾರ ಅವನ ಹೆತ್ತವರ ಅಪರಾಧವೆಂದರೆ ಅವನನ್ನು ಹುಟ್ಟಿಸಿದ್ದು. ಏಳು ಜನ ಒಡಹುಟ್ಟಿದವರ ಜೊತೆ, ಹಸಿವಿನ,  ಕಡುಬಡತನದ ಬದುಕು ತಳ್ಳುತ್ತಿರುವ ಝೈನ್ ನ ಹೋರಾಟ ಸಾಕಲಾಗದಿದ್ದರೂ ಮಕ್ಕಳನ್ನು ಮಾಡಿಕೊಳ್ಳುವ ತನ್ನಂತಹ ಎಲ್ಲಾ ಹೆತ್ತವರ ವಿರುದ್ಧ. ಅಲ್ಲಿಂದ ಮುಂದೆ ಝೈನ್ ಎದುರಿಸಿದ ಪರಿಸ್ಥಿತಿಗಳು, ಬದುಕಲು ಆತ ಮಾಡುವ ಸಾಹಸ, ತನ್ನ ತಂಗಿಯರನ್ನು ಕಾಪಾಡಲು ಆತನ ಮಾಡುವ ಪ್ರಯತ್ನಗಳು, ಹೆತ್ತವರ ತಣ್ಣನೆಯ ಕ್ರೂರತನಗಳು ಜೊತೆಗೆ, ನಿರಾಶ್ರಿತರ ಹೀನಾಯ. ಬದುಕು, ಬವಣೆಯೂ ಅನವಾರಣಗೊಳ್ಳುತ್ತಾ ಹೋಗುತ್ತದೆ.

ಲೆಬನಾನ್ ನಿಂದ ಬರುವ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಚಿತ್ರಗಳೂ ಸಾಕಷ್ಟು ಗಮನಸೆಳೆಯುತ್ತಿವೆ. ಝೈನ್ ಪಾತ್ರದಲ್ಲಿ ನಟಿಸಿರುವ ಸಿರಿಯಾದ ನಿರಾಶ್ರಿತ ಬಾಲಕ ಝೈನ್ ಅಲ್ ರಫೀಯ ಮುದ್ದು, ಮುಗ್ದ ಮತ್ತು ಗಂಭೀರ ಮುಖ ಹಲವು ದಿನ ಮನಸ್ಸಲ್ಲಿಯೇ ಉಳಿದು ಬಿಡುತ್ತದೆ. ಈಗಾಗಲೇ ತನ್ನ ಹಲವು ಚಿತ್ರಗಳಿಂದ ಗಮನಸೆಳೆದಿರುವ ನಿರ್ದೇಶಕಿ ನಾದೀನ್ ಲಬಿಕಿ ಈ ಚಿತ್ರದಲ್ಲಿ ಎರಡು ಯುದ್ಧ ನಿರತ ರಾಷ್ಚ್ರಗಳ ನಡುವೆ ಸಿಲುಕಿ ತನ್ನ ಗತ ವೈಭವ ಕಳೆದುಕೊಂಡಿರುವ ಲೆಬನಾನ್ ನ ಈಗಿನ ಸ್ಥಿತಿಯನ್ನು ನೈಜ್ಯವಾಗಿ ತೆರೆಯ ಮೇಲೆ ಮೂಡಿಸುತ್ತಾರೆ. ವಿಷಾದದ ಸಂಗತಿಯೆಂದರೆ, ಈ ಚಿತ್ರದ ಕತೆ ಲೆಬಾನಾನ್ ಗೆ ಸೀಮಿತವಾಗಬೇಕಿಲ್ಲ. ಎಷ್ಟೋ ದೇಶಗಳ ಸ್ಥಿತಿ ಇದಕ್ಕಿಂತ ಬೇರೆಯದಾಗೇನೂ ಇಲ್ಲ,       

ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ



Saturday, July 30, 2016

ದಸ್ತಕ್ - The knock

ಈ ಚಿತ್ರದ ಬಗ್ಗೆ ಬರೀಬೇಕು ಅಂತ ಅಂದುಕೊಂಡು ಬಹಳ ದಿನವೇ ಆಯ್ತು. ವಿಭಿನ್ನ ಕಥೆ, 1970ರ ಕಾಲಕ್ಕೆ ತೀರಾ ಕ್ರಾಂತಿಕಾರಿ ಎನ್ನಬಹುದಾದ ನಿರೂಪಣೆ, ಈಗಿನ ಕಾಲಕ್ಕೂ ಬೋಲ್ಡ್ ಎನಿಸಬಹುದಾದ ನಟನೆ, ಕಪ್ಪು ಬಿಳುಪು ಛಾಯಾಗ್ರಹಣದ ಎಲ್ಲಾ ಸೌಂದರ್ಯ ಸಾಧ್ಯತೆಗಳನ್ನು ಬಳಸಿಕೊಂಡಿರುವ ಸಿನಿಮಟೋಗ್ರಫಿ. ಮತ್ತು ಶಾಸ್ತ್ರೀಯ ರಾಗಗಳನ್ನು ಆಧರಿಸಿ ಮದನ್ ಮೋಹನ್ ನೀಡಿರುವ ಅತ್ಯುತ್ತಮ ಸಂಗೀತವನ್ನು ಹೊಂದಿದ್ದ ಒಂದು ಒಳ್ಳೆಯ ಚಿತ್ರ ದಸ್ತಕ್ – The Knock.  ಆದರೆ, ಇದರ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಕಾರಣ ಮಾತ್ರ ಬೇರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡರೂ ಭಾರತೀಯ ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಇದಕ್ಕೆ ಸರಿಯಾದ ಸ್ಥಾನಮಾನ ದೊರೆತಿಲ್ಲ ಮತ್ತು ಹಲವರಿಗೆ ದಸ್ತಕ್ ಅಪರಿಚಿತವಾಗಿಯೇ ಉಳಿದುಬಿಟ್ಟಿದೆ ಎಂಬುದು.

ಖ್ಯಾತ ಉರ್ದು ಸಾಹಿತಿ ರಾಜೇಂದ್ರ ಸಿಂಗ್ ಬೇಡಿ ತಮ್ಮ ಸಣ್ಣ ರೇಡಿಯೋ ನಾಟಕ ಆಧರಿಸಿ ತಗೆದ ದಸ್ತಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಹರಸಾಹಸ ಪಟ್ಟು ಮುಂಬೈನಲ್ಲಿ ಅಂತೂ ಒಂದು ಮನೆ ಬಾಡಿಗೆಗೆ ಪಡೆದು ಇನ್ನೇನೋ ತಮ್ಮ ದಾಂಪತ್ಯ ಜೀವನ ಆರಂಭಿಸಬೇಕು ಎಂದುಕೊಳ್ಳುವ ನವದಂಪತಿ ಹಮೀದ್ ಮತ್ತು ಸಲ್ಮಾ ಅವರಿಗೆ ರಾತ್ರಿ ಮನೆ ಬಾಗಿಲು ತಟ್ಟುವವವರ ಕಾಟ ಆರಂಭವಾಗುತ್ತದೆ. ತಮ್ಮ ಈ ಕನಸಿನ ಗೂಡಿನಲ್ಲಿ ಈ ಹಿಂದೆ ಬಾಡಿಗೆಗೆ ಇದ್ದವಳು ಒಬ್ಬಳು ನಾಚ್ ವಾಲೀ, ವೇಶ್ಯೆ ಎಂಬ ಸತ್ಯದ ಅರಿವಾಗುವ ವೇಳೆಗೆ ಯಾರದ್ದೂ ಸ್ವಂತ ಎನಿಸದ ಮುಂಬೈ ತನ್ನ ಕರಾಳತೆಯ ಮುಖವನ್ನ ತೋರಿಸಲು ಆರಂಭಿಸಿರುತ್ತದೆ. ಸಲ್ಮಾ ಳ ಮಧುರ ಕಂಠವೇ ಅವಳಿಗೆ ಮುಳುವಾಗಿ, ಆಕೆಯೂ ನಾಚ್ ವಾಲಿಯೇ ಇರಬೇಕು ಎಂಬ ಸುತ್ತಮುತ್ತಲಿನವರಲ್ಲಿ ಹುಟ್ಟುವ ಅನುಮಾನ ಮತ್ತು ನಂತರ ಆ ಅನುಮಾನವನ್ನು ನಿಜವಾಗಿಸಲೇಬೇಕೆನ್ನುವ ಅವರೆಲ್ಲರ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಒಳ ಉದ್ದೇಶಗಳು...ಹಮೀದ್ ಮತ್ತು ಸಲ್ಮಾರ ಕನಸನ್ನು ತಮ್ಮ ತಣ್ಣನೆಯ ಕ್ರೌರ್ಯದಿಂದ ಕೊಲ್ಲುತ್ತಾ ಬರುವ ನೆರೆಹೊರೆ...ಒಂದು ಅಮಾಯಕ ಹಾಗು ಭಾವನಾತ್ಮಕ ಮನಸ್ಸುಗಳೆರಡು ಬದಲಾಗುತ್ತಾ, ಬರಡಾಗುತ್ತಾ ಹೋಗುವ ರೀತಿ...ಇವೆಲ್ಲವನ್ನೂ ಅತ್ಯಂತ ಶಕ್ತಿಯುತವಾಗಿ ಮೆಟಾಫರ್ ಗಳ ಸಹಿತ ನಿರೂಪಿಸುವ ಬೇಡಿ ಆಗಿನ ಕಾಲದ ಆದರೆ ಈಗಲೂ ಪ್ರಸ್ತುತ ಎನಿಸುವ ಹಲವು ವಿಷಯಗಳನ್ನು ಕೇವಲ ಒಂದೇ ಮಾತುಗಳಲ್ಲೇ ಚೂರಿ ಇರಿದಷ್ಟೇ ಹರಿತವಾಗಿ ಹೇಳಿಬಿಡುತ್ತಾರೆ.

ಮನೆಗೆ ಮುಂಗಡ ಕೊಡಲು ಹೋಗುವ ಹಮೀದ್ ಹೆಸರೇನು ಎಂಬ ಪ್ರಶ್ನೆಗೆ ಎರಡು ಕ್ಷಣದ ಮೌನದ ಬಳಿಕ ತಡವರಿಸಿ ನಂದಕಿಶೋರ್ ಎನ್ನುವುದು ಅಂತಹ ದೃಶ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಚಿತ್ರದಲ್ಲಿ ಮತ್ತೆಲ್ಲೂ ಜಾತಿ ಧರ್ಮದ ಬಗ್ಗೆ ಮಾತನಾಡದ ಬೇಡಿ ಆ ಒಂದೇ ಒಂದು ಡೈಲಾಗ್ ಮೂಲಕ  ಮುಂಬೈನಂತಹ ಕಾಸ್ಮೋಪಾಲಿಟನ್ ನಗರದ ಹಿಪೋಕ್ರಸಿಯನ್ನ ಬಟಾಬಯಲು ಮಾಡುತ್ತಾರೆ.               

ಹಗಲಿಡೀ ಮನೆಯಲ್ಲಿ ಬಂಧಿಯಾಗಿ ಉಳಿಯುವ, ಹಾಡುವ ಅನುಮತಿಯೂ ಇಲ್ಲದ  ಸಲ್ಮಾ ನಿಧಾನವಾಗಿ ಬೇಯತೊಡಗುತ್ತಾಳೆ. ರಕ್ಷಣೆ ನೀಡಬೇಕಾಗಿದ್ದ ಮನೆಯಿಂದಲೇ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿ   ಮಧ್ಯರಾತ್ರಿವರೆಗೆ ಊರು ಸುತ್ತಿ ನಂತರ ಮನೆಗೆ ಮರಳತೊಡಗುತ್ತಾರೆ ಗಂಡ ಹೆಂಡತಿ. ಇದೆಲ್ಲದರ ಮಧ್ಯೆ ಸಾಮಾನ್ಯ ಪರಿಸ್ಥಿತಿಯಲ್ಲಿ ಒಳ್ಳೆಯವನಾಗಿರುವ ಮನುಷ್ಯ ಒತ್ತಡ, ಹತಾಶೆ ಮತ್ತು ಮಾನಸಿಕ ಹಿಂಸೆ ಹೆಚ್ಚಾದಾಗ ಹೇಗೆ ನಿಧಾನವಾಗಿ ತನ್ನೊಳಗೆ ಎಲ್ಲೋ ಅಡಗಿದ್ದ ರಾಕ್ಷಸೀ ಗುಣ ತೋರಿಸಲು ಆರಂಭಿಸುತ್ತಾನೆ ಮತ್ತು ಅದನ್ನು ತನಗಿಂತ ದುರ್ಬಲರ ಮೇಲೆಯೇ( ಇಲ್ಲಿ ಹಂಡತಿ) ಪ್ರದರ್ಶಿಸುತ್ತಾನೆ ಎಂಬುದಕ್ಕೆ ಹಮೀದ್ ಸಾಕ್ಷಿಯಾಗುತ್ತಾನೆ. ಅತ್ಯಂತ ಮೃದು ಸ್ವಭಾವದ, ಭಾವಜೀವಿ, ಪ್ರಾಮಾಣಿಕ ಹಮೀದ್ ನ ಒಳಗಿನ ರಾಕ್ಷಸ ಆಗಾಗ ಕಾಣಿಸಿಕೊಳ್ಳತೊಡಗುತ್ತಾನೆ. ಒಂದು ಕಡೆ ಸಲ್ಮಾ ತನ್ನ  ಚಾರಿತ್ತ್ರ್ಯದ ಬಗ್ಗೆ  ನಂಬಿಕೆ  ಕಳೆದುಕೊಳ್ಳುತ್ತಾ ಹೋದರೆ ಹಮೀದ್ ತನ್ನ ಪ್ರಾಮಾಣಿಕತೆಗೆ ಎಳ್ಳು ನೀರು ಬಿಡುತ್ತಾನೆ. 

ಸಂಸ್ಕಾರ ಚಿತ್ರದ ಮೂಲಕ, ಕನ್ನಡ ಚಲನಚಿತ್ರರಂಗ ದೇಶದ ಗಮನ ಸೆಳೆದ ವರ್ಷವೇ (1970) ದಸ್ತಕ್ ಕೂಡ ತೆರೆಕಂಡಿತು. ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡು ಗಮನ ಸೆಳೆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಾಯಕ ಸಂಜೀವ್ ಕುಮಾರ್, ನಾಯಕಿ ರೆಹನಾ ಸುಲ್ತಾನ್ ಮತ್ತು ಸಂಗೀತಕ್ಕಾಗಿ ಮದನ್ ಮೋಹನ್ ಪ್ರಶಸ್ತಿ ಪಡೆದರು. ತೀರಾ ತಡವಾಗಿ ಬಂತು ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಲಿದ್ದ ಮದನ್ ಮೋಹನ್ ಅವರ ಮನವೊಲಿಸಿ ಸಮಾರಂಭಕ್ಕೆ ಕರೆದೊಯ್ದರಂತೆ ಸಂಜೀವ್ ಕುಮಾರ್.


ದಸ್ತಕ್ ಆಗ ಬರುತ್ತಿದ್ದ ಕಲಾತ್ಮಕ ಚಿತ್ರಗಳ ಹಲವು ಅಲಿಖಿತ ನಿಯಮಗಳನ್ನು ತನ್ನ ಸಂಭಾಷಣೆ, ಹಾಡುಗಳಿಂದ ಮುರಿಯುತ್ತದೆ. ಮತ್ತು ಅದೇ ಚಿತ್ರದ ಶಕ್ತಿಯೂ ಅಗಿದೆ. ಮಜ್ರೂಹ್ ಸುಲ್ತಾಪುರಿ ಬರೆದಿರುವ ಉರ್ದು ಪ್ರಭಾವ ಹೆಚ್ಚಿರುವ ಕಾವ್ಯಾತ್ಮಕ ಗೀತೆಗಳು ಲತಾ ಮಂಗೇಷ್ಕರ್ ಹಾಡಿನ ಬದುಕಲ್ಲಿ ನಿಸ್ಸಂದೇಹವಾಗಿ ಒಂದು ಮೈಲುಗಲ್ಲು.

Tuesday, December 16, 2008

ಸತ್ಯ ಶೋಧನೆ ಮತ್ತು ಕಪ್ಪು ಸತ್ಯಗಳು


ಸಂಜೆ...
'ಬೆಟಪ್ಪ ಬಾ ಹಿಲ್ಲಿ....ಸೀ ಹೀ ಈಸ್ ದಿ ಐ ವಿಟ್ ನೆಸ್ ....'
ದೊಡ್ಡ ಕುಂಕುಮದ ಆಕೆ ತನ್ನ ವಿಚಿತ್ರ ಆಕ್ಸೆಂಟ್ ನ ಕನ್ನಡದಲ್ಲಿ ಕರೆದಾಗ, ಕಪ್ಪು ಕನ್ನಡಕದೊಳಿಗಿನಿಂದ ಸುಟ್ಟು ಕರಕಲಾಗಿದ್ದ ಗುಡಿಸಲುಗಳನ್ನು ನೋಡುತ್ತಿದ್ದ ಅಷ್ಟೂ ಪತ್ರಕರ್ತರು ತಿರುಗಿದರು. ಕಪ್ಪು ಬಣ್ಣದ, ಬಡಕಲು ದೇಹದ ಉದ್ದನೆ ವ್ಯಕ್ತಿಯೊಬ್ಬ ದೀನತೆಯಿಂದ ಕೈ ಮುಗಿದು ನಿಂತಿದ್ದ. ಟಿ ವಿ ವರದಿಗಾರರು ತಮ್ಮ ತಮ್ಮ ಕ್ಯಾಮರಾಮ್ಯಾನ್ ಗಳನ್ನು ಕರೆದರು. ಸುಟ್ಟ ಗುಡಿಸಲಿನ ಭಾಗದಂತೇ ಕಾಣುತ್ತಿದ್ದ ಅಲ್ಲಿನ ಜನರ ಸ್ಥಿತಿಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತಿದ್ದ,ಛಾಯಾಗ್ರಾಹಕರು ಆತನ ಸೌಂಡ್ ಬೈಟ್ ರೆಕಾರ್ಡ್ ಮಾಡಲು ಧಾವಿಸಿ ಬಂದರು.
ಗುಡಿಸಲಿಗೆ ಬೆಂಕಿ ಬಿದ್ದ ಆ ಪ್ರಕರಣವೂ ಇತರ ಎಲ್ಲಾ ದುರಂತಗಳಂತೆ ತಣ್ಣಗಾಗುವುದರಲ್ಲಿತ್ತು.ಅಪಾರ ಪ್ರಮಾಣದ ನಷ್ಟವಾಗಿದ್ದರೂ,ಹೆಚ್ಚಿನ ಸಾವು ನೋವು ಸಂಭವಿಸಿರಲಿಲ್ಲವಾದ್ದರಿಂದ ಸುದ್ದಿಬಾಕ ಮೀಡಿಯಾಗಳಿಗೂ ಪ್ರಕರಣ ಸಪ್ಪೆಯೆನಿಸಿತ್ತು.ಅದರೆ,ಯಾರಿಗೂ ಅರಿವಾಗದಂತೆ ಹುಟ್ಟಿಕೊಂಡಿದ್ದ ಸತ್ಯ ಶೋಧನಾ ಸಮಿತಿ ಇಂದು ಹೊಸ ಸುದ್ದಿಯೊಂದನ್ನು ಸ್ಫೋಟಿಸಿತ್ತು. ಸ್ಲಂ ಪ್ರದೇಶವನ್ನು ಖಾಲಿ ಮಾಡಿಸುವ ಸಲುವಾಗಿ ಲ್ಯಾಂಡ್ ಮಾಫಿಯಾ ಈ ಕೃತ್ಯ ಎಸಗಿದೆ ಎಂದಿತ್ತು. ಸರ್ಕಾರದ ನಿಕಟವರ್ತಿಯೊಬ್ಬನ ಕೈವಾಡವಿದೆ ಎಂಬ ಆರೋಪವನ್ನೂ ಮಾಡಿತ್ತು. ಪರಿಣಾಮ ನಗರದ ಇಡೀ ಮೀಡಿಯಾ ಪ್ರಪಂಚವೇ ಬೂದಿಯೊಳಗೆ ಸುದ್ದಿ ಕೆದಕಲು ಬಂದಿತ್ತು.
ಕ್ಯಾಮರಾ ಮ್ಯಾನ್ ಗಳ ಸಾಹಸ ಮುಂದುವರಿದಿದ್ದರೆ,ಬಹಳ ದಿನಗಳ ನಂತರ ಭೇಟಿಯಾಗಿದ್ದ ವರದಿಗಾರರೆಲ್ಲಾ ಗುಂಪು ಗುಂಪಾಗಿ ಸ್ವಾರಸ್ಯಕರ ಹರಟೆಯಲ್ಲಿ ತೊಡಗಿದ್ದರು. ಸತ್ಯ ಶೋಧನ ಸಮಿತಿಯ ಆಕೆಗೆ, ವರದಿಗಾರರು ತನ್ನ ಸೌಂಡ್ ಬೈಟ್ ಪಡೆಯಲಿಲ್ಲ ಎಂಬ ಬೇಸರವಿದ್ದಂತಿತ್ತು. ಮುಳುಗುತ್ತಿದ್ದ ಸೂರ್ಯನ ಕಿರಣಗಳು ಅಳಿದುಳಿದಿದ್ದ ಗುಡಿಸಲುಗಳ ಪಳೆಯುಳಿಕೆಗಳಿಗೆ ಕೆಂಪು ಬಣ್ಣ ಮೆತ್ತುತ್ತಿತ್ತು.

------------------------
ರಾತ್ರಿ.
ಪುಟ್ಟ ಬೆಚ್ಚನೆ ಗೂಡಿನಲ್ಲಿ ಇದುವರೆಗೆ ಹದುಗಿಕೊಂಡಿದ್ದವರು, ಬೀದಿಗೆ ಬಿದ್ದಿದ್ದಾರೆ.........ಟಿವಿಯಲ್ಲಿ ಪ್ರಣತಿ ಭಾವಪೂರ್ಣವಾಗಿ ವಿವರಣೆ ನೀಡುತ್ತಾ ಇದ್ದಳು.

'ಹೇಗೆ ಕಾಣ್ತಾ ಇದ್ದೀನಿ...'ಪ್ರಣತಿ ಪ್ರಶ್ನೆಗೆ ಸೂರಜ್ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೂ ಸಿಟ್ಟು ಇಳಿದಿಲ್ಲೇನೋ ಎಂದುಕೊಂಡ ಅವನತ್ತ ತಿರುಗಿದಳು. ಸೂರಜ್ ಟಿವಿ ಕಡೆ ಕಣ್ಣು ನೆಟ್ಟು ನೀರು ಕುಡಿಯುತ್ತಿದ್ದ. ಇನ್ನೂ ಒಂದೆರಡು ರೌಂಡ್ ಇಳಿಸಬೇಕು ಎಂಬ ಉತ್ಸಾಹದಲ್ಲಿದ್ದ ಸೂರಜ್ ನನ್ನು ಪಾರ್ಟಿ ಱರಂಭವಾದ ಸ್ವಲ್ಪ ಹೊತ್ತಿಗೇ ಅವಸರ ಅವಸರವಾಗಿ ಕರೆ ತಂದಿದ್ದಳು ಪ್ರಣತಿ. ಪಾಟೀಲ್ ಹೇಳಿದ್ದ 10.00 ಗಂಟೆ ನ್ಯೂಸ್ ನ ಹೈಲೈಟ್ ನಿಂದೇ ಸ್ಟೋರಿ ಅಂತ.

'ಉಹು...ಯಾಕೋ ನಿನ್ನ ಹೊಸ ಹೇರ್ ಸ್ಟೈಲ್ ಸ್ಕ್ರೀನ ನಲ್ಲಿ ಚೆನ್ನಾಗಿ ಕಾಣ್ತಾ ಇಲ್ಲ.' ಸೂರಜ್ ಮಾತು ಪ್ರಣತಿಗೆ ನಿಜ ಅನ್ನಿಸ್ತು. ಈ ಸ್ಟೋರಿಗೆ ಪಿಟಿಸಿ ಕೊಡಬೇಕಾಗುತ್ತೆ ಅಂತಲೇ ಬೆಳಗ್ಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಳು. 'ವೆಂಕಟ್ ಗೆ ಹೇಳಿದ್ದೆ ಅಷ್ಟು ಕ್ಲೋಸ್ ಅಪ್ ಬೇಡ ದಪ್ಪ ಕಾಣ್ತೀನಿ ಅಂತ. ಛೇ ಸರಿಯಾಗಿ ಬಂದಿಲ್ಲ...' ಅಂದು ಕೊಂಡಳು.
'ನಿನ್ನ ಹಿಂದೆ ಬ್ಯಾಕ್ ಡ್ರಾಪ್ ನಲ್ಲಿ ಕಾಣ್ತಾ ಇರೋ ಜನ ಎಷ್ಟು ಆರ್ಟಿಫಿಷಿಯಲ್ ಆಗಿ ಅಳ್ತಾ ಇದ್ದಾರೆ ನೋಡು' ಸೂರಜ್ ಹೇಳಿದ.
ಪ್ರಣತಿ ಘಟನೆಯ ಬಗ್ಗೆ ವಿವರಣೆ ನೀಡುವಾಗ ಫ್ರೇಮ್ ನಲ್ಲಿ ಹಿಂದುಗಡೆ ಏನು ಇರಬೇಕೆಂದು ವೆಂಕಟ್ ಸಾಕಷ್ಟು ತಲೆ ಕೆಡಿಸಿಕೊಂಡು ಬಳಿಕ ಬೀದಿಪಾಲದ ಜನ ಅಳುತ್ತಾ ಇದ್ದರೆ ಫ್ರೇಮ್ ತುಂಬಾ ಚೆನ್ನಾಗಿರುತ್ತೆ ಎಂದಿದ್ದ. ಅಲ್ಲಿದ್ದವರನ್ನೆಲ್ಲಾ ಸೇರಿಸಿ ಇವಳ ಹಿಂದೆ ಗೋಳಾಡುತ್ತಾ ನಿಲ್ಲುವಂತೆ ಹೇಳಿದ್ದ. ಯಾರಿಗೂ ಅಳು ಬರುತ್ತಿರಲಿಲ್ಲವಾದ್ದರಿಂದ ಅಳುವಂತೆ ನಟಿಸುತ್ತಾ ಕ್ಯಾಮರಾವನ್ನೇ ನೋಡಲಾರಂಭಿಸಿದ್ದರು. ವೆಂಕಟ್ ಸಾಕಷ್ಟು ಹೇಳಿ, ಹಲವು ಬಾರಿ ಟೇಕ್ ತಗೊಂಡು ಕೊನೆಗೆ ಒ ಕೆ ಎಂದಿದ್ದ. ಈಗ ನೀಡಿದ್ರೆ ಅಳುತ್ತಾ ನಿಂತವರೆಲ್ಲಾ ಕ್ಯಾಮೆರಾಗಾಗಿಯೇ ಅಳುತ್ತಿರುವಂತೆ ಅನಿಸುತ್ತಿತ್ತು. ಪ್ರಣತಿಗೆ ಚಿಕ್ಕದಾಗಿ ಆತಂಕ ಶುರುವಾಯ್ತು. ಕಳೆದ ಬಾರಿ ಹೂಚ್ ಟ್ರಾಜಿಡಿ ಸರಿಯಾಗಿ ಕವರ್ ಮಾಡಲಿಲ್ಲ ಅಂತ ಪಾಟೀಲ್ ಗುರುಗುಟ್ಟಿದ್ದ. ಬೇರೆ ಛಾನಲ್ ಗಳನ್ನು ನೋಡಿ, ಕುಟುಂಬವನ್ನು ಕಳೆದುಕೊಂಡು ಅಳುತ್ತಾ ಇರುವವರ ಬೈಟ್ ತಂದೇ ಇಲ್ಲ ಎಂದು ಎಗರಾಡಿದ್ದ. ದುರಂತಗಳ ವರದಿ ನೋಡ್ತಾ ಇದ್ದರೆ ಜನ ಕಣ್ಣೀರು ಸುರಿಸಬೇಕು ಗೊತ್ತಾ ಎಂದು ಮೂದಲಿಸಿದ್ದ. ಅದಕ್ಕಾಗಿಯೇ ಈ ಬಾರಿ ಪ್ರಣತಿ ವಿಶೇಷ ಕಾಳಜಿ ವಹಿಸಿದ್ದಳು. ಈಗ ನೋಡಿದ್ರೆ ಬರೀ ತಪ್ಪುಗಳೇ ಕಣ್ಣಿಗೆ ಬೀಳ್ತಾ ಇದೆ. ರಿಪೋರ್ಟ್ ಮುಗಿಯುತ್ತಿದ್ದಂತೆ ಬೇರೇನೂ ನೋಡೋ ಮನಸ್ಸಿಲ್ಲದೆ ಪ್ರಣತಿ ಟಿವಿ ಆರಿಸುವುದಕ್ಕೂ, ಮೊಬೈಲ್ ಸದ್ದು ಮಾಡುತ್ತಾ ಸಂದೇಶ ಬಂದಿದೆ ಎಂಬ ಮಾಹಿತಿ ನೀಡುವುದಕ್ಕೂ ಸರಿ ಹೋಯಿತು.
'ಹೋ, ಫೋನ್ ಮಾಡಿ ಉಗಿಯೋ ಬದಲು ಪಾಟೀಲ್ ಮೆಸೇಜ್ ಕಳಿಸಿದ್ದಾನೆ. ನಾಳೆ ಆಫೀಸಲ್ಲಿ ಇದೆ ಹಬ್ಬ' ಎಂದುಕೊಂಡು ಬೇಸರದಿಂದಲೇ ಮೊಬೈಲ್ ಕೈಗೆತ್ತಿಕೊಂಡ ಪ್ರಣತಿಗೆ ಆಶ್ಚರ್ಯವಾಯ್ತು. 'ನೈಸ್ ರಿಪೋರ್ಟ್. ವೆರೀ ಮಚ್ ಟಚಿಂಗ್. ಗುಡ್ ಎಂದಿತ್ತು.' ಪ್ರಣತಿಯ ಎಲ್ಲಾ ಆತಂಕ ಕ್ಷಣಾರ್ಧದಲ್ಲೇ ಕರಗಿತು.

-----------------------------
ಸುಟ್ಟು ಹೋಗಿದ್ದ ಆ ಕೊಳೆಗೇರಿಯ ಪಕ್ಕದ ಸಾರಾಯಿ ಅಂಗಡಿಯಲ್ಲಿ ನಿತ್ಯದಷ್ಟು ಜನ ಇರಲಿಲ್ಲ. ಮನೆ ಕಳೆದುಕೊಂಡಿದ್ದ ಹಲವರು ಬೇರೆ ಆಶ್ರಯ ಹುಡುಕಿ ಹೊರಟಿದ್ದರು. ಇನ್ನೂ ಕೆಲವರು ತಲೆಯ ಮೇಲಿನ ಸೂರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಬೆಟ್ಟಪ್ಪ ಯಾಕೋ ಸ್ವಲ್ಪ ಹೆಚ್ಚೇ ಭಾವಾವೇಷದಲ್ಲಿದ್ದ. ದುಖದಲ್ಲಿದ್ದ. 'ಏನ್ಲಾ ಹಿಂಗಾಯ್ತು ಕೆಂಚ,ಗುಂಡು ಹಾಕಿದ್ ಮೇಲೆ ಮೊನ್ನೆ ಸುಮ್ನೆ ಮನೆ ಕಡೆ ಹೋಗಿದ್ರೆ ಇಷ್ಟೆಲ್ಲಾ ಆಯ್ತಿತ್ತಾ,ಅಲ್ಲಿ ಹಟ್ಟಿ ತಾವ ಅಲ್ಯಾರನ್ನಾ ಬೈಯ್ತಾ ಕುಂತ್ಕೊಂಡೆ...ಅಲ್ಲೇ ಬೀಡಿ ಸೇದಿ ಒಗಾಸ್ದೋ . ನೋಡ್ಲಾ ಹೆಂಗಾಗೋಯ್ತು...'ಬೆಟ್ಟಪ್ಪ ಕುಡಿದ ಅಮಲಲ್ಲಿ ಗೋಳಾಡತೊಡಗಿದ.
'ಲೇ ಸುಮ್ಕಿರ್ಲಾ...ಯಾರಾದ್ರೋ ಕೇಳಿಸ್ಕೊಂಡ್ರೆ ಅಷ್ಟೇಯಾ ಜೈಲಿಗೆ ಹೋಗ್ಬೇಕಾಯ್ತದೆ. ಅದರಲ್ಲೂ ಯಾರೋ ಬಂದು ಬೆಂಕಿ ಹಾಕಿದ್ದೂ ನೋಡಿದೀವಿ ಅಂತ ಬೇರೆ ಸುಳ್ಳು ಹೇಳಿದೀವಿ.' ಕೆಂಚ ಬೆಟ್ಟಪ್ಪನ್ನ ಬಾಯಿ ಮುಚ್ಚಿ ಪಿಸುಗುಟ್ಟಿದ.
'ಅಲ್ಲಿ ಪೊದೆಗೆ ಬೆಂಕಿ ಹೊತ್ಕೊಂಡ್ರೂ ನಾವು ಸುಮ್ನೆ ಕಣ್ಣುಮುಚ್ಕೊಂಡು ಹೋಗಿದ್ದು ತಪ್ಪು ಕಣ್ಲಾ...ಬೆಂಕಿ ಇಷ್ಟು ದೊಡ್ದಾಗಿ ಸುಟ್ಟು ಹಾಕ್ ಬಿಡ್ತಾದೇ ಅನ್ ಕಂಡಿರಲಿಲ್ಲಾ ಕೆಂಚ...'ಬೆಟ್ಟಪ್ಪನ್ನ ಗೋಳಾಟ ಮುಂದುವರಿದೇ ಇತ್ತು.

-------------------------------
ಮಧ್ಯರಾತ್ರಿ
'ಮಿನಿಸ್ಚ್ರು ರೆಡ್ಡಿ ಹತ್ರ ಮಾತಾಡಿದ್ಯಾ....' ಟಿವಿಯಲ್ಲಿ ಬರುತ್ತಿದ್ದ ಯಾವುದೋ ರೊಮ್ಯಾಂಟಿಕ್ ಮೂವಿಯಲ್ಲಿ ಮುಳುಗಿದ್ದ ಪ್ರಣತಿ, ಸೂರಜ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ.
'ನೀನು ಮಾತಾಡ್ದೇ ಇದ್ರೆ, ಕಷ್ಟ ಆಗುತ್ತೆ ಪ್ರಣತಿ. ಎಲ್ಲಾ ಕಡೆ ಗ್ಲೋಬಲ್ ರೆಸೆಷನ್ ಅಂತಿದ್ರೂ ನಮ್ಮ ಬಾಸ್ ನನಗೆ ಡಬಲ್ ಪ್ರಮೋಶನ್ ಕೊಡೋಕೆ ರೆಡಿ ಇದಾರೆ. ಈ ಕಾಂಟ್ರಾಕ್ಟ್ ಒಂದು ನಮ್ಮ ಕಂಪನಿಗೆ ಸಿಗಬೇಕು ಅಷ್ಟೆ. ರೆಡ್ಡಿ ನಿನ್ನ ಮಾತು ತೆಗೆದು ಹಾಕಲ್ಲ. ಇಲ್ಲ, ಅಂದ್ರೆ ನೀನು ಬಹಳ ಇಷ್ಟ ಪಟ್ಟಿರೋ ಆ ಫಾರ್ಮ ಹೌಸ್ ಕೊಂಡ್ಕೋಳ್ಳೋದು ಸಾಧ್ಯನೇ ಇಲ್ಲ. ಮರೆತು ಬಿಡು.' ಕಳೆದ ಒಂದು ವಾರದಿಂದ ಸೂರಜ್ ಕೇಳುತ್ತಲೇ ಇದ್ದ. ಪ್ರಣತಿ ಯಾಕೋ ರೆಡ್ಡಿಯನ್ನು ಕೇಳಲು ಹಿಂಜರಿದಿದ್ದಳು.
'ಖಂಡಿತಾ ನಾಳೆ ಮಾತಾಡ್ಲೇ ಬೇಕು. ರೆಡ್ಡಿಗೆ ತಾನು ಎಷ್ಟು ಬಾರಿ ಪಬ್ಲಿಸಿಟಿ ಕೊಟ್ಟಿಲ್ಲ.ಹಿಂಜರಿಕೆ ಯಾಕೆ. ತಾನು ಯಾರಿಗೂ ಅನ್ಯಾಯ ಮಾಡ್ತಾ ಇಲ್ವಲ್ಲಾ.' ಪ್ರಣತಿ ತನಗೆ ತಾನೇ ಸಮರ್ಥನೆ ಕೊಟ್ಟುಕೊಂಡಳು.
ಅಗಲೇ, ಫೋನ್ ರಿಂಗಾಯ್ತು...ನಂಬರ್ ನೋಡಿದವಳೇ ಬೇಸರದಿಂದ ಫೋನ್ ಕಟ್ ಮಾಡಿದ್ಲು. 'ಯಾರದ್ದು...'ಸೂರಜ್ ಕೇಳಿದ.
'ಅದೇ ಗುಡಿಸಲಿನ ಜನ. ಇವತ್ತು ಹೋಗಿದ್ದೆನಲ್ಲಾ, ಏನಾದ್ರೋ ಇನ್ಫರ್ಮೇಶನ್ ಕೊಡಬಹುದು ಅಂತ ಫೋನ್ ನಂಬರ್ ಕೊಟ್ಟೆ. ಈಗ ನೋಡಿದ್ರೆ ಅವನ ಮಗ ಯಾರೋ ಎಸ್ ಎಸ್ ಎಲ್ ಸಿ ನಲ್ಲಿ 70 ಪರ್ಸೆಂಟ್ ತಗೊಂಡಿದಾನಂತೆ. ಆ ಇಡೀ ಕೊಳೆಗೇರಿಯಲ್ಲಿ ಇದುವರೆಗೆ ಅವನಷ್ಟು ಮಾರ್ಕ್ಸ್ ಯಾರೂ ತಗೊಂಡೇ ಇಲ್ವಂತೆ. ಒಳ್ಳೇ ಕಾಲೇಜಲ್ಲಿ ಸೀಟು ಕೊಡ್ಸಿ,. ಮಿನಿಸ್ಚ್ರ ಹತ್ರ ಹೇಳಿ ಹಣದ ಸಹಾಯ ಮಾಡ್ಸಿ ಅಂತಾ ಒಂದೇ ಸಮನೆ ಪಕ್ಕದ ಕಾಯಿನ್ ಬೂತ್ ನಿಂದ ಫೋನ್ ಮಾಡ್ತಾ ಇದ್ದಾನೆ. ಮಿನಿಸ್ಟ್ರ ಹತ್ರ ಇದೆಲ್ಲಾ ಕೇಳೋದು ಏನು ಚೆನ್ನಾಗಿರುತ್ತೆ ಹೇಳಿ...'ಪ್ರಣತಿ ಬೇಸರದಿಂದ ನುಡಿದಳು.
ಮೊಬೈಲ್ ಸ್ವಿಚ್ ಆಫ್ ಮಾಡಿದವಳೆ...'ನಡೀ ಸೂರಜ್ ಮಲ್ಕೊಳ್ಳೋಣ, I am very much tierd. ನಾಳೆ ಖಂಡಿತಾ ರೆಡ್ಡಿ ಆಫೀಸಿಗೆ ಹೋಗ್ತೀನಿ' ಎಂದು ಎದ್ದು ನಿಂತಳು.
-------------------------------
"ನಾನು ಹೇಳುವುದೆಲ್ಲಾ ಸತ್ಯ" ಹೆಸರಿನಲ್ಲಿ ಪ್ರಕಟಗೊಂಡಿದೆ. 

Friday, May 30, 2008

ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ

ಇದೊಂದು ಜೋಕ್.....ಕಾಲೇಜಿನ ದಿನಗಳಲ್ಲಿ ನಮ್ಮ ಮ್ಯಾಥ್ಸ್ ಲೆಕ್ಚರರ್ ಹೇಳುತಿದ್ದ ಜೋಕ್....
ಒಬ್ಬ ಸೈಂಟಿಸ್ಟ್ ಬಳಿ ಒಂದು ಕಪ್ಪೆ ಇತ್ತಂತೆ. ಅದು ಅವನು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿತ್ತು. ಒಂದು ಸಲ ಸೈಂಟಿಸ್ಟ ಇದೇ ಕಪ್ಪೆ ಮೇಲೇ ಪ್ರಯೋಗ ನಡೆಸಲು ಮುಂದಾದ. ಕಪ್ಪೆಯ ಒಂದು ಕಾಲು ಕಟ್ ಮಾಡಿ ಹಾರು ಎಂದ. ಕಪ್ಪೆ ಹಾರಿತು. ಎರಡನೇ ಕಾಲು ಕಟ್ ಮಾಡಿ ಹಾರು ಎಂದಾಗ ಕಷ್ಟ ಪಟ್ಟು ಹಾರಿತು. ಮೂರನೇ ಕಾಲು ಕಟ್ ಮಾಡಿ ಹಾರು ಎಂದಾಗ ತನ್ನೆಲ್ಲಾ ಶಕ್ತಿ ಬಳಸಿ ಹಾರಿತು. ಕೊನೆಗೆ ನಾಲ್ಕನೇ ಕಾಲೂ ಕಟ್ ಮಾಡಿ ಹಾರು ಎಂದಾಗ ಮಾತ್ರ ಅದಕ್ಕೆ ಹಾರೋಕೆ ಸಾಧ್ಯವಾಗಲಿಲ್ಲ. ಆಗ ಸೈಂಟಿಸ್ಟ್ ತನ್ನ ನೋಟ್ ಬಕ್
ನಲ್ಲಿ ಬರೆದು ಕೊಂಡ....
.....ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ....

ಕಾಲೇಜಿನ ಆ ದಿನಗಳಲ್ಲಿ ನನಗೆ ಬಹಳ ಇಷ್ಟವಾದ ಜೋಕ್ ಇದು. ನೀವೂ ಕೇಳಿರ್ತೀರಾ...ಮೊನ್ನೆ ಸುಮ್ನೆ ನಡೆದು ಹೋಗ್ತಾ ಇದ್ದಾಗ,ಈ ಜೋಕ್ ಮೆಲುಕು ಹಾಕ್ತಾ ಇದ್ದೆ. ಜೀವನದ ಸತ್ಯ ಹೇಳುತ್ತಿದೆ ಅನಿಸಿತು.ಇತ್ತೀಚೆಗೆ ದಿನಾ ತಡರಾತ್ರಿ ಬರುತ್ತಿರುವ ಗಂಡನ ಕಿಸೆಯಲ್ಲಿ ದೊರೆತ ತರುಣಿಯ ಫೋಟೋ, ಪ್ರತಿದಿನ ಮನೆಯಿಂದ ಹೊರಗೆ ಕಾಲಿಟ್ಟಾಗಲೇ ತನ್ನ ಮನೆ ಗೇಟು ತೆರೆದು ನಿಲ್ಲುವ ಕನ್ನಡಕದ ಹುಡುಗ, ಮನೆಯಲ್ಲಿ ಕಳ್ಳತನವಾದ ದಿನದಿಂದಲೇ ಹೇಳದ ಕೇಳದೆ ಕೆಲಸಕ್ಕೆ ಚಕ್ಕರ್ ಕೊಟ್ಟ ಕೆಲಸದಾಕೆ, ಇವರೆಲ್ಲಾ ಒಂದೊಂದು ಕಥೆ ಹೇಳುತ್ತಾರೆ. ಒಂದಕ್ಕೂ ಮತ್ತೊಂದಕ್ಕೂ ಯಾವುದೋ ರೀತಿ ತಾಳೆಯಾಗುತ್ತೆ. ಲೆಕ್ಕಾಚಾರ ಸರಿ ಹೋಗುತ್ತೆ. ಅದೇ ನಿಜ ಅನ್ನಿಸುತ್ತೆ. 3+4 ಕೂಡ 7, 5+2 ಕೂಡ 7 ಎಂಬುದು ಮರೆತು ಹೋಗುತ್ತೆ. ಈ ತಪ್ಪು ವಿಶ್ಲೇಷಣೆಗಳು ಬದುಕಿನ ಹಾದಿಯನ್ನೇ ತಪ್ಪಿಸಿದ್ದನ್ನು ಕಂಡಿದ್ದೀನಿ. ಕಪ್ಪೆಗೆ ನಾಲ್ಕೂ ಕಾಲು ಕಟ್ ಮಾಡಿದಾಗ ಅದು ಹಾರದಿರುವುದಕ್ಕೆ ಕಿವಿ ಕೇಳದಿರುವುದು ಕಾರಣವಲ್ಲ, ಕಾಲಿಲ್ಲದಿರುವುದು ಕಾರಣ ಎಂದು ಅರಿವಾಗುವುದರೊಳಗೆ ಬದುಕು ಹಾದಿ ತಪ್ಪಿರೊತ್ತೆ. ಅಲ್ವಾ.........

Monday, May 19, 2008

ಅಮ್ಮ ಮಾತಾಡ್ಲಿಲ್ಲ.........

ಕಳೆದ ಮೂರು ದಿನಗಳಿಂದ ಮನೆಯಲ್ಲಿ ದುಸುಮುಸು.... ಎಲ್ಲವೂ ಸರಿಯಿಲ್ಲ ಎಂಬ ಭಾವ...ಎಷ್ಟು ಬೇಕೋ ಅಷ್ಟೇ ಮಾತುಕತೆ. ಮಗಳಿಗಂತೂ ಚಿಕ್ಕ ಪುಟ್ಟ ವಿಷಯಕ್ಕೂ ಕಣ್ಣಂಚಲ್ಲೇ ನೀರು. ನಾನು ಏನು ಮಹಾ ಕೇಳಿದ್ದು....ಮಂಡಿ ಕಾಣೋ ಮಿನಿ ಸ್ಕರ್ಟ್ ಹಾಕೋತೀನಿ ಅಂದ್ನಾ....ಮೈಮಾಟ ತೋರೋ ಟೈಟ್ ಟೀ ಶರ್ಟ್ ಬೇಕು ಅಂದ್ನಾ...ನನ್ನ ಇಷ್ಟು ಚಿಕ್ಕ ಆಸೆಗೆ ಬೇಡ ಅಂತಾ ಹಠ ಹಿಡಿದಿರೋ ಈ ಅಮ್ಮಒಳ್ಳೇ 18ನೇ ಶತಮಾನದಲ್ಲಿ ಬದುಕುತ್ತಿರೋ ತರಾ ಆಡ್ತಾಳಲ್ಲ.ಮೂರು ದಿನದ ಹಿಂದಿನ ಮಾತು-ಜಗಳ ನೆನಪಾಗಿ ಮತ್ತೆ ಮಗಳ ಕಣ್ಣಂಚಲ್ಲಿ ಮುತ್ತು ಸುರಿಯಿತು.
ಮೊನ್ನೆ ತಾನೇ ಕಾಲೇಜಿನ ಬಣ್ಣದ ಲೋಕ ಪ್ರವೇಶಿಸಿದ್ದ ಹುಡುಗಿ ಅಲ್ಲಿನ ರಂಗು ನೋಡಿ ದಂಗಾಗಿದ್ದು ಸುಳ್ಳಲ್ಲ. ಮೊನ್ನೆವರೆಗೂ,ನೀಟಾಗಿ ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದ, ಚೆನ್ನಾಗಿ ಡ್ರೆಸ್ ಮಾಡ್ಕೋಳ್ಳೋದು ಯಾವುದಾದರೋ ಮದುವೆ ಇದ್ದಾಗ ಅದ್ಕೊಂಡಿದ್ದ ಹುಡುಗಿಗೆ ಕಾಲೇಜಿನ ವಸ್ತ್ರ ವೈಭವ ಭ್ರಮೆ ಹುಟ್ಟಿಸಿತ್ತು.ಎರಡು ದಿನ ಕಾಲೇಜಿಗೆ ಹೋಗಿ ಬಂದವಳೇ ತನ್ನಲ್ಲಿರುವ ವಸ್ತ್ರ ಭಂಡಾರ ತೀರಾ ಚಿಕ್ಕದು ಮತ್ತು ಔಟ್ ಡೆಟೆಡ್ ಅನ್ನಿಸಿ, ಅಂದೇ ಅಪ್ಪನನ್ನು ಹೊರಡಿಸಿ ತನಗೆ ಬೇಕಾದ ಬಣ್ಣ ಬಣ್ಣದ ಸಲ್ವಾರ್ ಸೂಟ್,ಕುರ್ತಾ, ಜೀನ್ಸ್ ಕೊಂಡಿದ್ದಳು. ಆದರೆ, ಹೊಸದಾಗಿ ತಂದ ಜೀನ್ಸ್ ತೊಟ್ಟು ಕಾಲೇಜಿಗೆ ಹೊರಟು ನಿಂತಾಗ ಮಾತ್ರ ಯಾಕೋ ಎಲ್ಲಾ ಸರಿಯಿಲ್ಲ ಅನ್ನಿಸಿತ್ತು. ಕಾಲೇಜು ತಲುಪಿದ ಮೇಲಂತೂ ನನ್ನ ಜೀನ್ಸ್ ಗೆ ಉದ್ದನೇ ಕೂದಲೂ ಯಾವ ರೀತಿ ನೋಡಿದ್ರೂ ಹೊಂದುತ್ತಿಲ್ಲ ಅನ್ನಿಸಿತ್ತು.

ಇದುವರೆಗೆ ಉದ್ದನೆ ಕೂದಲನ್ನು ಎರಡಾಗಿ ಸೀಳಿ ಜಡೆ ಹೆಣೆದು ಅದನ್ನು ಮಡಿಸಿ ಅಮ್ಮ ರಿಬ್ಬನ್ ಬಿಗಿದರೆ ನಾಳಿನವರೆಗೂ ಅದು ಭದ್ರ. ಎಷ್ಟು ಉದ್ದ ಕೂದ್ಲೇ ನಿಂದು ಚೆನ್ನಾಗಿದೆ ಅಂತ ಯಾರಾದ್ರೋ ಹೇಳಿದ್ರೆ ಮನೆಗೆ ಬಂದು ಕನ್ನಡಿ ಮುಂದೆ ನಿಂತು ಕೂದಲು ಸವರುತ್ತಿದ್ದ ಹುಡುಗಿಗೆ ತನ್ನ ಕೂದಲ ಕುರಿತು ಸಾಕಷ್ಟು ಹೆಮ್ಮೇನೇ ಇತ್ತು. ಆದರೆ,ಈಗ, ಮೊದಲು ಜೀನ್ಸ್ ಹಾಕಿದಾಗ ಯಾವತ್ತೂ ಅನ್ನಿಸಿರದಿದ್ದ ಭಾವ ಹುಡುಗಿಯನ್ನ ಕಾಡಿ, ಹತ್ತಾರು ಬಾರಿ ಲೇಡಿಸ್ ರೂಮ್ ಗೆ ನುಗ್ಗಿ ಕನ್ನಡಿ ಮುಂದೆ ನಿಲ್ಲುವಂತೆ ಮಾಡಿತ್ತು. ಜೀನ್ಸ್ ಜೊತೆ ಸೊಂಟ ಮುಟ್ಟುವ ಬಿಗಿಯಾಗಿ ಹೆಣೆದ ಉದ್ದನೇ ಜಡೆ....ಯಾಕೋ ತೀರಾ ಹಳ್ಳಿ ಗಮಾರಿ ಥರಾ ಅನ್ನಿಸಿದ್ದೇ , ಹಡುಗಿ ಹೇರ್ ಕಟ್ ಮಾಡಿಸೋ ನಿರ್ಧಾರಕ್ಕೆ ಬಂದು ಬಿಟ್ಲು.

ಯಾಕೋ ನಿಂದು ತೀರಾ ಅತಿ ಆಯ್ತು ಕಣೇ. ಹೊಸ ಡ್ರೆಸ್ ಬೇಕು ಅಂದೆ, ಬೇರೆ ವಾಚ್ ಬೇಕು ಅಂದೆ, ಸ್ಕೂಟಿ ಕೊಡ್ಸಿ ಅಂತಾ ಆಗ್ಲೆ ಡಿಮ್ಯಾಂಡ್ ಇಟ್ಟಿದ್ದೀಯಾ.ಈಗ ನೋಡಿದ್ರೆ ಕೂದ್ಲು ಕಟ್ ಮಾಡಿಸ್ತಾಳಂತೆ. ನೀನೇನು ಕಾಲೇಜಿಗೆ ಶೋಕಿ ಮಾಡೋಕೆ ಹೋಗ್ತೀಯೋ ಓದೋಕೋ.... ಅಮ್ಮನಿಂದ ತೀವ್ರ ವಿರೋಧ ವ್ಯಕ್ತವಾದಾಗ, ಹುಡುಗಿಯೂ ಹಟಕ್ಕೆ ಬಿದ್ದಳು. ಊಟಿ ತಿಂಡಿ ಕಡಿಮೆ ಆಯ್ತು, ಮಾತಂತೂ ಇಲ್ಲವೇ ಇಲ್ಲ ಅನ್ನುವಷ್ಟು ಚಿಕ್ಕದಾಯಿತು. ನಗು ನಿಂತೇ ಹೋಯ್ತು. ಹಠ ಬಿಡದ ಅಮ್ಮ ಮಗಳ ಮೌನ ಕೆದಕದೆ ಹಾಗೇ ಬಿಟ್ಟರು. ಮೂರನೇ ದಿನ ಮಾತ್ರ ರಾತ್ರಿ ಊಟಕ್ಕೆ ಕೂತಾಗ ಅನ್ನ ತಿನ್ನದೇ ತಟ್ಟೆ ಕೆದಕುತ್ತಾ ಕೂತಿದ್ದವಳನ್ನು ಕಂಡು ಅಮ್ಮ, ಸರಿ ನಿನ್ನಿಷ್ಟ ಏನೂ ಬೇಕಾದ್ರೂ ಮಾಡ್ಕೋ ಅಂದಿದ್ದೇ ಹುಡುಗಿಗೆ ಗೆದ್ದ ಭಾವ. ಅರಿವಿಲ್ಲದಂತೆ ಮೊಗದಲ್ಲಿ ಅರಳಿದ ನಗೆ ಮಲ್ಲಿಗೆ.

ಮಾರನೇ ದಿನ ಕಾಲೇಜಿನಲ್ಲಿ ಹೊಸ ಫ್ರೆಂಡ್ಸಗಳನ್ನೆಲ್ಲಾ ಕೇಳಿ ಹೇರ್ ಕಟ್ ಶೈಲಿಯನ್ನ ಮನದಲ್ಲೇ ಸಿದ್ದಪಡಿಸಿಕೊಂಡಳು. ದಿನಾ ಒಂದಷ್ಟು ಪೌಡರ್ ಮೆತ್ತಿಕೊಂಡು ಮೇಕಪ್ ಆಯ್ತು ಅಂದ್ಕೋಳ್ಳೋ ಅಮ್ಮನಿಗೇನು ಗೊತ್ತು, ಅಂದು ಕೊಂಡೇ ಪಕ್ಕದ ಮನೆ ಆಂಟಿ ಹತ್ರ ಬ್ಯೂಟಿ ಪಾರ್ಲರ್ ಮಾಹಿತಿ ಕಲೆ ಹಾಕಿದಳು. ಸಂಜೆ ಅಮ್ಮನ ಜೊತೆ, ಬ್ಯೂಟಿ ಪಾರ್ಲರ್ ಪ್ರವೇಶಿಸಿದಳೇ, ಅಲ್ಲಿದ್ದ ಹುಡುಗಿ ಮುಖದಲ್ಲಿ ಮೂಡಿದ್ದ ಪ್ರಶ್ನೆಗೆ ಹೇರ್ ಕಟ್ ಅಂತ ಹೆಮ್ಮೆಯಿಂದಲೇ ಉತ್ತರಿಸಿ ಸರದಿಗಾಗಿ ಕಾದು ಕುಳಿತಳು. ಅಮ್ಮ ಅಲ್ಲೇ ಇದ್ದ ಕಳೆದ ವರ್ಷದ ಯಾವುದೋ ವಿಮೆನ್ ಮ್ಯಾಗಝಿನ್ ಹಿಡಿದು ಕುಳಿತಾಗ ತನ್ನ ಹೊಸ ಲುಕ್ಸ ಹೇಗಿರಬಹುದು ಅಂತಾ ಕನಸು ಕಂಗಳಲ್ಲಿ ರಂಗವಲ್ಲಿ ಬರೆದಳು.

ಪಾರ್ಲರ್ ಹುಡುಗಿ ಯಾರದೋ ಹುಬ್ಬು ಕೆತ್ತಿ, ಇನ್ಯಾರದೋ ಮುಖಕ್ಕೆ ಮತ್ತೇನೂ ಮೆತ್ತಿ ಬನ್ನಿ ಅಂದಾಗ ಮಾತ್ರ ಯಾಕೋ ಹುಡುಗಿ ಮಂಕಾದಳು. ಬಲಿ ಪೀಠ ಏರುವಂತೆ ಎತ್ತರದ ಕುರ್ಚಿ ಏರಿ ಕುಳಿತಳು. ಯಾವ ಕಟ್ ಎಂಬ ಪ್ರಶ್ನಗೆ ಅಸ್ಪಷ್ಟವಾಗಿ ಗೊಣಗಿದಳು. ಸಸ್ ಸಸ್ ಅಂತ ಕೂದಲ ತುಂಬಾ ಸ್ಪ್ರೇ ಮಾಡಿದ ಬ್ಯೂಟೀಶಿಯನ್ ಕೂದಲನ್ನು ಒಮ್ಮೆ ಎತ್ತಿ ಹಿಡಿದವಳೇ ಮೂರು ದಿನಗಳ ಬೇಗುದಿ ಅರಿತಂತೆ ಇಷ್ಟು ಕೂದಲು ಬೆಳೆಸೋಕೆ ನಿಮ್ಮ ಅಮ್ಮ ಎಷ್ಚು ವರ್ಷ ಕಷ್ಟ ಪಟ್ಟಿರ್ತಾರೆ ಗೊತ್ತಾ ನನಗೇನೂ ನಿಮಿಷಕ್ಕೆ ಕಟ್ ಮಾಡಿ ಬಿಸಾಕ್ತೀನಿ ಎಂದಳು. ಈ ಹೇಳಿಕೆಗೇ ಕಾದಿದ್ದಂತೇ ಹುಡುಗಿ ಕಣ್ಣು ಹನಿಗೂಡಿತು. ದೇವರೇ ಅಮ್ಮ ಈಗ ಒಂದೇ ಸಾರಿ ಕಟ್ ಮಾಡಿಸಬೇಡ ಕಣೇ ಅನ್ನಲಿ ಈ ಪೀಠದಿಂದ ಕೆಳಗಿ ಇಳೀತೀನಿ ಅಂದುಕೊಂಡಳು. ಅಮ್ಮ ಮಾತೇ ಮರೆತಂತೆ ಸುಮ್ಮನಿದ್ದಳು. ಕತ್ತರಿ ನಡುವೆ ಸಿಲುಕಿದ್ದ ಹುಡುಗಿಯ ಕೂಡಲು ಕಸಕ್ ಶಬ್ದದೊಂದಿಗೆ ಕಳಚಿ ನೆಲಕ್ಕೆ ಬಿತ್ತು.....ಜೊತೆಗೆ,ಹುಡುಗಿಯ ಕಣ್ಣಲ್ಲಿ ಮಡುಗಟ್ಟಿದ್ದ ಹನಿ....

Friday, October 12, 2007

ವೋ ಬರಸಾತ್ ಕೀ ರಾತ್........

ಹೊರಗೆ ಸುರಿಯುವ ಮಳೆ, ನಸುಗತ್ತಲು, ಮುಖೇಶ್ ನ ಧರ್ದ್ ಬರೀ ಕಂಠದಿಂದ ಭೂಲೀ ಹುಯಿ ಯಾದೋ ಮುಝೆ ಇತನಾ ನ ಸತಾವೋ.....ಕಿಟಕಿಯ ಸರಳಿನ ಮೂಲಕ ಹನಿಗಣನ್ನೆಣಿಸುತ್ತಿರುವ ನಾನು...........

ಯಾವತ್ತಾದರೋ ಜೋರಾಗಿ ಸುರಿವ ಮಳೆ ನೋಡುತ್ತಾ ನಿಮ್ಮ ಇಷ್ಟದ ಹಾಡು ಕೇಳುತ್ತಾ, ಒಂಟಿಯಾಗಿ ಕಾಲ ಕಳೆದಿದ್ದೀರಾ? ಹಾಗಿದ್ದರೆ ಮಳೆ ಕಟ್ಟಿಕೊಡುವ ಭಾವನಾ ಪ್ರಪಂಚದ ಪರಿಚಯ ನಿಮಗಿರಲೇ ಬೇಕು.
ಆದರೂ, , ಮಳೆಗಿರುವ ನೆನಪುಗಳನ್ನು ಬಡಿದೆಬ್ಬಿಸುವ ಅಗಾಧ ಶಕ್ತಿಯ ಅರಿವಾಗಬೇಕೆಂದರೆ ಮಲೆನಾಡಿನ ಯಾವುದಾದರೋ ಹಳ್ಳಿಯಲ್ಲಿ ಮಳೆಗಾಲದ ಒಂದು ರಾತ್ರಿಯನ್ನು ಕಳೆಯಬೇಕು
ಸೂರ್ಯ ಮುಳುಗುತ್ತಿದ್ದಂತೆ ತೆಪ್ಪಗಾಗುವ ಈ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿದು ಕರೆಂಟ್ ಕೈಕೊಟ್ಟರೆ ಕೇಳುವುದೇ ಬೇಡ. ಜೀಗುಟ್ಚುವ ಕತ್ತಲಲ್ಲಿ ನಿಶಬ್ವವೇ ಮೂಖವಾದಂತಹ ಮೌನ. ಧೋ ಎಂದು ಸುರಿಯುವ ಮಳೆಯ ಸದ್ದು ಕೂಡ ತನ್ನ ಏಕತಾನತೆಯಿಂದಾಗಿ ಅ ಮೌನವನ್ನು ಮತ್ತಷ್ಟು ಹೆಪ್ಪುಗಟ್ಟಿಸುತ್ತದೆ. ಕಣ್ಣು ಹಾಯಿಸಿದಷ್ಚು ಉದ್ದಕ್ಕೂ ಕಾಣುವ ಅದೇ ನೋಟ. ನೋಡುತ್ತಾ ನಿಂತರೆ ನೆನಪುಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ,

ಉಣ್ಣದೆ ಮಲಗಿದವರನ್ನು ಎಬ್ಬಿಸಿ ಅಮ್ಮ ಬಲವಂತವಾಗಿ ಊಟ ಮಾಡಿಸಿದ್ದು, 25 ಪೈಸೆ ಕದ್ದಿದ್ದಕ್ಕೆ ಅಪ್ಪ ಹೊಡೆದಿದ್ದು, ಶಾಲೆಯಲ್ಲಿ ಕೊಟ್ಟ ಪುಟ್ಟ ಸ್ಟೀಲ್ ಲೋಟದ ಬಹುಮಾನವನ್ನು ಅಪ್ಪ ಹೆಮ್ಮೆಯಿಂದ ಎಲ್ಲರಿಗೂ ತೋರಿಸಿದ್ದು. ಫ್ರಿಲ್ಸ್ ಇರುವ ಫ್ರಾಕ್ ತೊಡುವ ಕನಸು ಕನಸಾಗಿಯೇ ಉಳಿದದ್ದು, ತಮ್ಮನಿಗೆ ಬರೀ ಸುಳ್ಳು ಕಥೆ ಕಟ್ಟಿ ಹೇಳಿ ನಂಬಿಸಿದ್ದು, ಅದೇ ಪುಟ್ಟ ತಮ್ಮ ಕಡಿಮೆ ಮಾರ್ಕ್ಸ್ ತಗೊಂಡು ಅಳುತ್ತಿದ್ದ ನನ್ನ ಕಣ್ಣೊರೆಸಿದ್ದು, ಎರಡು ವರ್ಷ ನಿರಂತರವಾಗಿ ಕಾಲೇಜಿನವರೆಗೂ ಹಿಂಬಾಲಿಸಿದ ಹುಡುಗ ಕೊನೆವರೆಗೂ ಮೌನವಾಗಿಯೇ ಉಳಿದು ಮರೆಯಾದದ್ದು, ಹೈಸ್ಕೂಲ್ ಪ್ರೇಮಕ್ಕೆ ಇನ್ಫ್ಯಾಚುಯೇಶನ್ ಎಂಬ ಹೆಸರಿಟ್ಟು ಬದುಕು ಗುರಿ ತಪ್ಪದಂತೆ ಕಾದಿದ್ದು......ಹೀಗೇ ಏನೇನೋ ಒಂದಕ್ಕೊಂದು ಸಂಬಂಧವಿಲ್ಲದ ನೆನಪುಗಳ ಸರಮಾಲೆ.. ಸುರಿಯುತ್ತಿರುವ ಮಳೆಯಿಂದಾಗಿ ಮನದಲ್ಲಡಗಿರುವ ನೆನಪುಗಳೆಲ್ಲಾ ಒದ್ದೆಯಾಗಿ ಒಂದಕ್ಕೊಂದು ಅಂಟಿಕೊಂಡು ಬಿಡಿಸಲಾಗದೆ, ಕಲಸುಮೇಲೊಗರವಾದ ರೀತಿ...

ಈ ಯಾವ ನೆನಪುಗಳೂ ಮನಸ್ಸಿಗೆ ಎಂದಿಗೂ ಸಂತಸ ತಂದ್ದಿಲ್ಲ ..ಅಂತರ್ಮುಖಿಯಾಗಿಸುತ್ತದೆ. ಆದರೂ ಮತ್ತೆ ಮತ್ತೆ ಮಳೆ ನೋಡುತ್ತಾ ನೆನಪುಗಳ ಧೂಳು ಕೊಡಹುವ ಬಯಕೆ..ಗಾಯವನ್ನು ಮತ್ತೆ ಮತ್ತೆ ಮುಟ್ಟಿಕೊಂಡು ನೋವು ಅನುಭವಿಸುವಂತೆ ..ಎಂತಹದ್ದೋ ಅನುಭವಿಸುವ ಚಟ ಹತ್ತಿಸುವಂತಹ ಸಣ್ಣ ನೋವು....ಅದಕ್ಕೆ ನನಗನ್ನಿಸುವುದು ಮಳೆಯೆಂದರ ಮ್ಲಾನತೆ.......ಖಿನ್ನತೆ.....ನೆನಪುಗಳ ಯಾತನೆ.

Saturday, August 18, 2007

ಗುಲ್ ಮೊಹರ್ ಹಾದಿಯಲ್ಲಿ ಒಂದು ಪಕಳೆ


{ ಹದಿಹರೆಯದ ಆ ದಿನಗಳಲ್ಲಿ ಮೂಡಿದ ನನ್ನ ಚೊಚ್ಚಲ ಕೃತಿ। ನಾನು ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿಸಿದ್ದ ಕಥೆ. ಹೀಗಾಗಿ ಪ್ರೀತಿ ಕೊಂಚ ಹೆಚ್ಚು। }

ಪ್ರೀತಿಯ ಹುಡುಗ,

ಹಾಗಂತ ಕರಿಯಬಹುದು ತಾನೆ? ಈಗ ನೀನು ಹುಬ್ಬು ಹಾರಿಸುತ್ತೀ! ಹಣೆ ಒತ್ತಿಕೊಳ್ಳುತ್ತಿ ಸರೀನಾ? ಆಶ್ಚರ್ಯ ಆದಾಗ ನೀನು ಹೀಗೇ ತಾನೆ ಮಾಡೋದು. ಈ ವಯಸ್ಸಿನಲ್ಲಿ [ನಿನಗೆಷ್ಟು ಈಗ ೪೮ ವರ್ಷ ಹೌದು ತಾನೆ] ಯಾರು "ಹುಡುಗ" ಅಂತ ಕರೆಯೋದು ಅಂತ ಆಶ್ಚರ್ಯನಾ? ಇಪ್ಪತ್ತರ ಚಿಗುರು ಮೀಸೆ ಹುಡುಗನಾಗಿ ಕೊನೆಯ ಬಾರಿ ನಿನ್ನ ನೋಡಿದಾಗ ನನ್ನ ಮನದಲ್ಲಿ ಮೂಡಿದ್ದ ನಿನ್ನ ಚಿತ್ರಕ್ಕೆ ಇನ್ನೂ ವಯಸ್ಸಾಗಿಲ್ಲ . ಇದ್ಯಾರಪ್ಪ ಅಂತ ಯೋಚಿಸುವುದನ್ನು ನಿಲ್ಲಿಸು. ನಿನಗೆ ಖಂಡಿತಾ ನನ್ನ ನೆನಪಿಲ್ಲ. ಇಷ್ಟು ದಿನ ಅದುಮಿ ಅದುಮಿ ಒಳಗೆ ಮುಚ್ಚಿಟ್ಟಿದ್ದ ಭಾವನೆಗಳೆಲ್ಲಾ ಇಂದೇಕೋ ಒಮ್ಮೆಗೆ ಆಸ್ಪೊಟಿಸಿವೆ. ಅದನೆಲ್ಲಾ ಒಳಗೆ ತುರುಕಿ ಪುನ: ಹೃದಯದ ಕದ ಮುಚ್ಚುವ ಮೊದಲು ಹೊರ ಹಾರಿದ್ದರಲ್ಲಿ ನಿನ್ನ ನೆನಪಿನ ತುಣುಕೂ ಇತ್ತು. ಭಾವನೆ ಹರಿಬಿಡಲು ಒಂದು ಗುರಿ ಬೇಕು ತಾನೆ? ನೀನು ನನ್ನ ಗುರಿ ಅಷ್ಟೇ. ನಿನ್ನ feedback ಬೇಕಿಲ್ಲ. ಆದ್ದರಿಂದ ಸುಮ್ಮನೆ ಓದು.
ನಾನು ನಿನ್ನ ಜೊತೆ ಕಾಲೇಜಿನಲ್ಲಿ ನಿನ್ನದೇ ತರಗತಿಯಲ್ಲಿ ಕೂತಿರುತ್ತಿದ್ದ ಹುಡುಗಿ. ಎಲ್ಲರಿಗಿಂತ ಮೊದಲು ಬಂದು ಎಲ್ಲರಿಗಿಂತೆ ಕೊನೆಗೆ ಎದ್ದು ಸುಮ್ಮನೆ ನಡೆದು ಬಿಡುತ್ತಿದ್ದ ನಾನು ನಿನ್ನ ಅಷ್ಟೇ ಯಾಕೆ ಮತ್ಯಾರ ನೆನಪಲ್ಲೂ ಇರಲಿಕ್ಕಿಲ್ಲ. ಏಕೆಂದರೆ ನನಗೆ ನನ್ನದೇ ಆದ Identity ಇರಲೇ ಇಲ್ಲ. ಇರಲಿಲ್ಲ ಯಾಕೆ, ಈಗಲೂ ಇಲ್ಲ.
ಅವತ್ತೊಂದು ದಿನ ಕಾಲೇಜಿನಲ್ಲಿ ನೀನು "ಮೇರೆ ಮೆಹೆಬೂಬ್ ತುಝೆ..." ಅಂತ ಭಾವಪೂರ್ಣವಾಗಿ ಹಾಡಿದಾಗ ಅದ್ಯಾಕೋ ಗೊತ್ತಿಲ್ಲ ನೀನು ನನಗಾಗಿಯೇ ಹಾಡಿದೆ ಅನ್ನಿಸಿಬಿಟ್ಟಿತು. ಅಂದಿನಿಂದ ನಿನ್ನ ಗುಟ್ಟಾಗಿ ಗಮನಿಸಲಾರಂಭಿಸಿದೆ. ನೀನು ಕ್ಲಾಸಿನಲ್ಲಿ ಕುಳಿತು ಹುಡುಗಿಯರನ್ನು ನೋಡುವುದು, ಅದರಲ್ಲೂ ಸೀಮಾ ರೆಡ್ಡಿಯ ಕಡೆ ಆಗಾಗ ಕಳ್ಳ ನೋಟ ಹರಿಸುವುದು, ಸೀಮಾ ಬೇರೆಯವನ ಜೊತೆ ಸುತ್ತಲಾರಂಭಿಸಿದಾಗ ಒಂದು ತಿಂಗಳು ಗಡ್ಡ ಬಿಟ್ಟು, ನಂತರ ಟ್ರಿಮ್ ಆಗಿ ಶಾರದಳನ್ನು ಹಿಂಬಾಲಿಸಿದ್ದು, ನೋಟ್ಸ್ ಬರೆದಂತೆ ನಟಿಸಿ ಚಿತ್ರ ಬರೆದದ್ದು ಯಾವುದೂ... ಯಾವುದೂ... ನನ್ನ ಕಣ್ಣು ತಪ್ಪಿಸಿಲ್ಲ. ಹುಡುಗ ಇವುಗಳಲೆಲ್ಲಾ ನನಗೆ ಬೇಸರ ತಂದ ಸಂಗತಿ ಒಂದೇ... ಇಷ್ಟೆಲ್ಲಾ ಮಾಡಿದವ ನೀನು ತಪ್ಪಿ ಕೂಡ ನನ್ನ ಕಡೆ ನೋಡಲಿಲ್ಲ.
ಹಾಗಂತ ನಾನು ಕುರೂಪಿಯಾಗಿದ್ದೆ ಅಂತ ತಿಳೀಬೇಡ. ನಾನು ಸುಂದರಿಯರ ಸಾಲಿಗೆ ಸೇರಿದವಳೇ. ಅಪ್ಪನ ಶ್ರೀಮಂತಿಕೆಯೂ ಜೊತೆಗಿತ್ತು, ಬುದ್ದಿವಂತೆಯೂ ಆಗಿದ್ದೆ. ಆದರೆ ಇದೆಲ್ಲದರ ಜೊತೆಗೆ ಮುಖೇಡಿತನ, ಆತ್ಮವಿಶ್ವಾಸದ ಕೊರತೆಯೂ ಇತ್ತು. ಹುಡುಗರು ಬಿಡು, ಹುಡುಗಿಯರಲ್ಲೂ ನನಗೆ ಸುಮ ಒಬ್ಬಳೆ ಸ್ನೇಹಿತೆ. ನಮ್ಮ ಕ್ಲಾಸಿನ ಎಲ್ಲಾ ಹುಡುಗ ಹುಡುಗಿಯರ ಕಣ್ಣಿಗೆ ನಾನು ಗಂಭೀರ, ಶಾಂತ, ಅಂತರ್ಮುಖಿಯಾದ ಹುಡುಗಿ. ಆದರೆ ನಿಜ ಹೇಳುತ್ತೇನೆ ಕೇಳು, ನನಗೆ ನೀವು ಆರೋಪಿಸಿದ ಆ ಗಂಭೀರತೆ ಬೇಡವಿತ್ತು. ನನಗೂ ನೀನಾ, ರಮ್ಯ, ಸ್ಮಿತಾರಾವ್ ರಂತೆ ಮಾಡ್ ಡ್ರೆಸ್ ಮಾಡಿಕೊಂಡು ಊರು ಸುತ್ತೋ ಆಸೆ ಇತ್ತು. ಕ್ಲಾಸಿಗೆ ಚಕ್ಕರ್ ಮಾಡೋ ಆಸೆ ಇತ್ತು, ಲೆಕ್ಚರರ್‍ಗೆ ಅಡ್ಡ ಹೆಸರಿಟ್ಟು ಕರೆಯೋ ಆಸೆ ಇತ್ತು. ಥಿಯೇಟರ್‍ನ ಕತ್ತಲಲ್ಲಿ ಕುಳಿತು ಆಗಿನ ಬಿಸಿ ಜೋಡಿ " ಹಂ ತುಮ್ ಎಕ್ ಕಮರೇ ಮೆ ..." ಎಂದು ಹಾಡುವುದನ್ನು ನೋಡೋ ಆಸೆ ಇತ್ತು. ಆದರೆ... ಜೊತೆಗೆ ಭಯ ಬೇಕಾದಷ್ಟಿತ್ತು.
ಹೀಗಿದ್ದ ನನ್ನ ಶುಷ್ಕ ಜೀವನದಲ್ಲೂ ಒಂದು ಬಾರಿ ವಸಂತ ಬಂತು. ಅಂತ ಸಂಭ್ರಮಿಸಿದೆ. ಹೆಚ್ಚೇನೂ ಆಗಿರಲಿಲ್ಲ. ಸುಮ ಒಂದು ಪುಸ್ತಕ ಕೊಟ್ಟು ನಿನಗೆ ಕೊಡಲು ಹೇಳಿ ಊರಿಗೆ ಹೋಗಿದ್ದಳು ಅಷ್ಟೆ. ನಗಬೇಡ ಹುಡುಗ ಅವತ್ತು ರಾತ್ರಿ ಇಡೀ ನನಗೆ ಸರಿಯಾಗಿ ನಿದ್ದೆ ಇಲ್ಲ. ನಿದ್ದೆ ಬಂದರೂ ಅರೆ ಬರೆ ಕನಸು. ನಾನು ಪುಸ್ತಕ ಕೊಟ್ಟೆ, ನೀನು ಕೈ ಹಿಡಿದೆ. ಕಣ್ಣಲ್ಲಿ ಇಳಿದೆ. ನಂತರ ಮದುವೆ ಮಕ್ಕಳು... ಹೀಗೆ ಏನೇನೋ. ಕನಸುಗಳಿಗೆ ಮಿತಿ ಕ್ಷಿತಿಜ ತಾನೆ?
ಮಾರನೆ ದಿನ ಚೂರು ಮುತುವರ್ಜಿಯಿಂದ ಅಲಂಕರಿಸಿಕೊಂಡೆ. ನೆನಪಿಡು ಚೂರೇ ಚೂರು. ನನ್ನ ಅಲಂಕಾರದಲ್ಲಿ ಏನೇ ವ್ಯತ್ಯಾಸ ಆದರೂ ಅಜ್ಜಿಯ ಬೆದರಸಿವ ಕಣ್ಣಿನಿಂದ ಹಿಡಿದು ತಂಗಿಯ ಕೆದಕುವ ಪ್ರಶ್ನೆಯವರೆಗೂ ಏನೆಲ್ಲಾ ಎದುರಿಸಬೇಕು. ಅವತ್ತು ಕಾರಿಡಾರಿನ ಆ ತುದಿಯಿಂದ ನೀನು ಒಬ್ಬನೇ ನಡೆದು ಬರುತ್ತಿದ್ದರೆ ನಾನು ಆಗಲೇ ಬೆವರಲಾರಂಭಿಸಿದ್ದೆ. ಬೆವರಿ ನಡುಗುತ್ತಿದ್ದ ಕೈ ಚಾಚಿ "ನೋಟ್ಸ್" ಎಂದೆ. ಉಳಿದ ಹುಡುಗಿಯರೊಂದಿಗೆ ಏನೆಲ್ಲಾ ನೆಪ ತೆಗೆದು ಹರಟೆ ಹೊಡಿಯುವ ನೀನು ಬಗ್ಗಿಸಿದ್ದ ತಲೆ ಎತ್ತಿ ನೋಟ್ಸ್ ಪಡೆದು ಗೌರವಯುತವಾಗಿ "ಥ್ಯಾಂಕ್ಸ್" ಎಂದೆ. ಪುನ: ತಲೆ ತಗ್ಗಿಸಿ ನಡೆದುಬಿಟ್ಟೆ. ನಾನು ಪೋಣಿಸಿದ್ದ ಕನಸುಗಳೆಲ್ಲಾ ದಾರ ಕಡಿದು ಚೆಲ್ಲಾಪಿಲ್ಲಿಯಾಗಿ ಕಾರಿಡಾರಿನ ತುಂಬಾ ಹರಡಿ ಬಿದ್ದಿದ್ದರೆ ನೀನು ಅವುಗಳನ್ನೇ ನಿರ್ದಾಕ್ಷಿಣ್ಯವಾಗಿ ತುಳಿದು ಹೋಗಿಬಿಟ್ಟೆ. ಅಂದು ರಾತ್ರಿ ನನ್ನ ದಿಂಬಿಡೀ ಕಣ್ಣೀರಿನಿಂದ ಒದ್ದೆಯಾಗಿತ್ತು.
ನಿಮ್ಮ ಕಾಲೇಜಿನ ನೆನಪುಗಳಲ್ಲಿ ಚಂದದ ಹುಡುಗಿಯರಿರಬಹುದು. ಅವರೊಂದಿಗೆ ನೀವು ಕಳೆದ ಮಧುರ ಕ್ಷಣಗಳಿರಬಹುದು.ಲೆಕ್ಚರರಿಂದ ಬೈಸಿಕೊಂಡ, ಹುಡುಗಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ನೆನಪುಗಳಿರಬಹುದು ಆದರೆ ನನಗೆ ಕಾಲೇಜೆಂದರೆ ನೆನಪಾಗುವುದು ಬರೀ ದಪ್ಪ ಕನ್ನಡಕದ ಪ್ರೊಫೆಸರ್‍ಗಳು, ಕಪ್ಪು ಹಲಗೆಯ ತುಂಬ ತುಂಬಿಕೊಂಡ ಬಿಳಿ ಬಿಳಿ ಅರ್ಥವಾಗದ ಲೆಕ್ಕಗಳು, ಉತ್ತರಪತ್ರಿಕೆಯ ಮೇಲಿನ ಕೆಂಪು ಅಂಕಗಳು ಮಾತ್ರ. ನೀನು ನಂಬಲಿಕ್ಕಿಲ್ಲ, ಫೇರ್‍ವೆಲ್ ದಿನ ನೀವೆಲ್ಲಾ ನಿಮ್ಮ ನೆನಪುಗಳನ್ನು ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದರೆ, ನಾನು ಚಿಂತಿಸುತ್ತಿದುದ್ದು ಒಂದೇ ವಿಷಯ. ಲೇಟಾದರೆ ಮನೆಯಲ್ಲಿ ಏನು ಹೇಳುತ್ತಾರೋ ಅಂತ. ಅದಕ್ಕೆ ನನ್ನ ಕಾಲೇಜು ಜೀವನವೇ ಒಂದು ಶುಷ್ಕ ಅನುಭವ. ನೀನು ನಂಬಲಾರೆ ಐದು ವರ್ಷಗಳಲ್ಲಿ ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆ "ನೋಟ್ಸ್" ಮತ್ತು "ಥಾಂಕ್ಸ್".
ಕಾಲೇಜು ಬಿಟ್ಟ ನಂತರ ನಿನ್ನ ನೋಡಲೇ ಇಲ್ಲ, ಮನೆಯಲ್ಲಿ ಓದು ಸಾಕು ಎಂದರು. ವರಾನ್ವೇಷಣೆ ಆರಂಭಿಸಿದರು. ಆಗ ನೀನು ಖಾಲಿ ಮಾಡಿದ ಜಾಗವನ್ನು ಎದುರು ಮನೆಗೆ ಹೊಸದಾಗಿ ಬಂದ ಹುಡುಗ ತುಂಬಿದ. ಮತ್ತೆ ಕನಸುಗಳು, ಕಲ್ಪನಾ ಲೋಕ. "ನಾನೆ ವೀಣೆ ನೀನೇ ತಂತಿ..." ಆಶ್ಚರ್ಯ ಯಾಕೆ? ಜೀವನದಲ್ಲಿ ಒಬ್ಬರನ್ನೇ ಪ್ರೀತಿಸಲಿಕ್ಕೆ ಸಾಧ್ಯ ಅನ್ನುವ ಮಾತನ್ನ ನಾನು ಒಪ್ಪುವುದಿಲ್ಲ. ಅದು ಪ್ರೇಮದ ದಾರಿದ್ರ್ಯ ಇರುವವರ ಮಾತು. ನನ್ನ ಹೃದಯದಲ್ಲಿರುವ ಸಾಗರದಷ್ಟು ಪ್ರೀತಿಯನ್ನು ಎಷ್ಟೋ ಜನಕ್ಕೆ ಹಂಚಿಕೊಟ್ಟರೂ ಉಳಿಯುವಂತಿತ್ತು.
ನಂತರ ನನ್ನ ಮದುವೆ ಒಬ್ಬ ಡಾಕ್ಟರ್ ಜೊತೆ ನಡೆಯಿತು. ಒಳ್ಳೆ ಮನೆ, ಒಳ್ಳೆ ಗಂಡ, ದುಡ್ಡು, ಅಂತಸ್ತು ಎಲ್ಲಾ ಸಿಕ್ಕಿತು. ನನ್ನ ಅಪ್ಪ ಕಟ್ಟಿಸಿಕೊಟ್ಟ ಆಸ್ಪತ್ರೆಯಲ್ಲಿ ದುಡಿಯಲಿಕ್ಕೇ ಹುಟ್ಟಿದಂತೆ ನನ್ನವರ ಅವಿರತ ಶ್ರಮ. ಇವೆಲ್ಲದರ ಮಧ್ಯದಲ್ಲೇ ಎರಡು ಮಕ್ಕಳು. ನಿಜ ಹೇಳುತ್ತೇನೆ ಹುಡುಗ, ಹೆಣ್ಣಿನ ಜೀವನ ಸಾರ್ಥಕ ಎನಿಸುವುದು ಈ ಹಂತದಲ್ಲೇ, ತಾಯ್ತನದಲ್ಲಿ. ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುವ ಎರಡು ಮುದ್ದಾದ ಜೀವಗಳು. ಎಂತಹ ಸುಖ, ಹೃದಯ ಬಿರಿಯುವಷ್ಟು ತುಂಬಿದ್ದ ಪ್ರೀತಿಯನ್ನೆಲ್ಲಾ ಮೊಗೆದು ಮೊಗೆದು ಧಾರೆ ಎರೆದು ಅವರನ್ನು ಬೆಳೆಸಿದೆ. ನೀವೆಲ್ಲಾ ಎಲ್ಲೋ ಮರೆಯಾಗಿ ಬಿಟ್ಟಿರಿ. ಮರೆತೇ ಬಿಟ್ಟೆನೇನೋ ಎಂಬಂತಹ ವಿಸೃತಿ. "ಅಮ್ಮ ಷೂಸ್ ಎಲ್ಲಿ?", "ಜಡೆ ಹಾಕು", "ಬೇಗ ತಿಂಡಿ ಕೊಡು", "ಇನ್ನೊಂದು ಸ್ವಲ್ಪ ಹೊತ್ತು ಆಡ್ತಿನಿ" ಎನ್ನುತ್ತಿದ್ದ ಕಾಡುತ್ತಿದ್ದ ಮಕ್ಕಳು ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಾಕಾಗುತ್ತಿರಲಿಲ್ಲ. ತುಂಬಿದ ದಿನಗಳು, ಯಾರೋ ಒಬ್ಬರು ನಮ್ಮನ್ನೆ ಸಂಪೂರ್ಣವಾಗಿ ಆವಲಂಭಿಸಿದ್ದಾರೆ.ಎಂದರೆ ಎಂತಹ ತೃಪ್ತಿ ಅಲ್ಲವಾ?
ಮೊನ್ನೆ ಮೊನ್ನೆ ತನಕ ನನಗೆ ಅಂಟಿಕೊಂಡಿದ್ದ ಮಕ್ಕಳು ಈಗ ತಿಂಡಿ ಮಾಡಿ ಕಾದರೆ "sorry ನನ್ನದಾಯ್ತು" ಅನ್ನುತ್ತಾರೆ. ಬೇಗ ಮನೆಗೆ ಬನ್ನಿ ಅಂದರೆ "please ಮಮ್ಮಿ its my life, I know how to lead it" ಅನ್ನುತ್ತಾರೆ. ನನ್ನೊಂದಿಗೆ ಅನ್ಯೊನ್ಯವಾಗಿ ಬೆಸೆದುಕೊಂಡಿದ್ದ ಅವರ ಜೀವನ ಯಾವಾಗ ಅವರದೇ ಆಯಿತೋ ನನಗೆ ಈಗಲೂ ಅಚ್ಚರಿ.
ನನ್ನವರಿಗೆ ಎಂದಿಗೂ ನಾನು ಒಂದು ಅವಶ್ಯಕತೆ ಅಂತ ಅನಿಸಿರಲೇ ಇಲ್ಲ. ಅವರ ಜೀವನವೇ ಬೇರೆ. ಹೀಗಾಗಿ ತುಂಬೆಕೊಂಡಿದ್ದ ದಿನಗಳು, ಮನಸ್ಸು ಮತ್ತೆ ಖಾಲಿ ಖಾಲಿ. ಈಗ ಪುನ: ನೀವೆಲ್ಲಾ ವೇಷ ಸರಿಪಡಿಸಿಕೊಂಡು ತಲೆ ಕೊಡವಿ ರಂಗಪ್ರವೇಶ ಮಾಡಿದ್ದೀರಿ.
ಇವತ್ತು ನೋಡು ನಾನು ಒಬ್ಬಳೇ ಮನೆಯಲ್ಲಿ. ಮಗ ಸ್ನೇಹಿತರ ಮನೆಯಲ್ಲಿ, ಮಗಳಿಗೆ ಯಾವುದೋ tour, ಇವರಿಗೆ ಮೆಡಿಕಲ್ ಕಾನ್ಫರೆನ್ಸ್. ಹೊರಗೆ ಬೆಳ್ಳನೆ ಬೆಳದಿಂಗಳು. ಅರೆಬಿರಿದ ದುಂಡು ಮಲ್ಲಿಗೆ. "ಚೌದವೀಕಾ ಚಾಂದ್ ಹೊ..." ರಫಿಯ ಕಂಠ. ಎಷ್ಟು ಸುಂದರವಾಗಿದೆ. ಇವರು ಇರುತ್ತಿದ್ದರೂ ಯಾವುದಾದರು ಹ್ಯೂಮನ್ ಅನಾಟಮಿ ಪುಸ್ತಕ ಓದುತ್ತಿರುತ್ತಿದ್ದರು. ಗಂಡ ಹೆಂಡಿರಲ್ಲಿ ಒಬ್ಬರು ಮಾತ್ರ ಭಾವುಕರಾಗಿರುವುದು ಎಂತಹ ದುರಂತ ಅಲ್ವಾ? ರಾತ್ರಿಯ ಈ ನೀರವತೆಯಲ್ಲಿ ಯಾಕೋ ನೀವೆಲ್ಲಾ ತುಂಬಾ ಕಾಡುತ್ತಿದ್ದೀರಾ. ಮನಸ್ಸು ಬಿಚ್ಚಿ ಹಗುರಾಗುವ ಸಲುವಾಗಿಯೇ ಪತ್ರ
ನನ್ನ ಬಗ್ಗೆ ಎನೆಂದುಕೊಳ್ಳುತ್ತಾ ಇದ್ದೀಯ? ನಲತ್ತರ ಹರೆಯದಲ್ಲಿ ಹಳೆಯ ಪ್ರೇಮದ ಕನವರಿಕೆ ಅಂದುಕೊಂಡೆಯಾ? ತಪ್ಪೆನ್ನುತ್ತೀಯಾ? ನನ್ನ ಗಂಡನ ಬಗ್ಗೆ ಎನೇನೋ ಕಲ್ಪಿಸಿಕೊಳ್ಳಬೇಡ. ಅವರು ಒಬ್ಬ ಅತ್ಯಂತ ಒಳ್ಳೆಯ ಗಂಡ. ನನಗೆ ಬೇಕಾದ ಸೆಕ್ಯುರಿಟಿ, ಸಾಮಾಜಿಕ ಗೌರವ ಕಲ್ಪಿಸಿ ಕೊಟ್ಟಿದ್ದಾರೆ. ಒಂದು ದಿನವೂ ನನ್ನ ಮಾತು ಮೀರಿಲ್ಲ. ಪಾರ್ಟಿಗಳು, ಔಟಿಂಗ್, ವರ್ಷಕ್ಕೆರಡು ಟೂರ್, ಎಲ್ಲಾ ಇದೆ. ಆದರೆ ಅದೇಕೋ ಭಾವನೆಗಳು ಬೆಸೆದಿವೆ ಎನಿಸುವುದಿಲ್ಲ.
ಅಂದಿನ ಬಿಸಿ ರಕ್ತದ ಕಾಲದಲ್ಲಿ ಪ್ರೀತಿ ವ್ಯಕ್ತಪಡಿಸಲಾರದವಳಿಗೆ ಈಗ ಧೈರ್ಯ ಬಂದಿದೆ ಎಂದಿಕೊಂಡೆಯಾ? ಖಂಡಿತಾ ಇಲ್ಲ. ಎಲ್ಲೋ ಒಳಗೆ ಹುದುಗಿದ್ದ ಮರೆಯಾಗಿದ್ದ ನೀವೆಲ್ಲ ಇಂದು ಹೊರಗಿಣುಕಿದ್ದೀರಿ ಅಷ್ಟೆ. ಈಗಲೂ ನನಗೆ ಹೆಸರು ಹೇಳೋ ಧೈರ್ಯ ಇಲ್ಲ. ಜೊತೆಗೆ ಸುಮಾಳ ಅಟೋಗ್ರಾಫ್ ನಿಂದ ಕದ್ದ ನಿನ್ನ ಹಳೆಯ ವಿಳಾಸಕ್ಕೆ ಕಳಿಸುತ್ತಿರುವ ಈ ಪತ್ರ ನಿನ್ನ ಕೈ ಸೇರದು ಎಂಬ ವಿಶ್ವಾಸ. ಸಿಕ್ಕರೂ ನೀನು ಹೆಚ್ಚು ಕೆದಕಲಾರೆ ಎಂಬ ನಂಬಿಕೆ.
ಹಾ....ಈ ಪತ್ರ ನಿನ್ನ ಹೆಂಡತಿಗೆ ಸಿಕ್ಕರೂ ಹೆಚ್ಚೇನು ಗಲಾಟೆಯಾಗದು ಆಕೆ ನನ್ನನು ಅರ್ಥೈಸಿಕೊಳ್ಳುತಾಳೆ ಎಂದುಕೊಳ್ಳುತ್ತೇನೆ. ಎಕೆಂದರೆ ಅವಳೂ ನನ್ನ ಗಂಡನಂತವನ ಬಗ್ಗೆ ಕನಸಿಸುತ್ತಿಲ್ಲ ಎಂದು ಯಾವ ನಂಬಿಕೆ? ಸಿನಿಕಳಂತೆ ಮಾತನಾಡುತ್ತಿದ್ದೇನೆ ಅನ್ನುತ್ತೀಯಾ? ಇಲ್ಲ ಬಿಡು ಎಷ್ಟೆಂದರೂ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಲ್ವಾ? ಇಲ್ಲಿಗೆ ಮುಗಿಸಲೇ?
ಇತಿ