Tuesday, December 16, 2008

ಸತ್ಯ ಶೋಧನೆ ಮತ್ತು ಕಪ್ಪು ಸತ್ಯಗಳು


ಸಂಜೆ...
'ಬೆಟಪ್ಪ ಬಾ ಹಿಲ್ಲಿ....ಸೀ ಹೀ ಈಸ್ ದಿ ಐ ವಿಟ್ ನೆಸ್ ....'
ದೊಡ್ಡ ಕುಂಕುಮದ ಆಕೆ ತನ್ನ ವಿಚಿತ್ರ ಆಕ್ಸೆಂಟ್ ನ ಕನ್ನಡದಲ್ಲಿ ಕರೆದಾಗ, ಕಪ್ಪು ಕನ್ನಡಕದೊಳಿಗಿನಿಂದ ಸುಟ್ಟು ಕರಕಲಾಗಿದ್ದ ಗುಡಿಸಲುಗಳನ್ನು ನೋಡುತ್ತಿದ್ದ ಅಷ್ಟೂ ಪತ್ರಕರ್ತರು ತಿರುಗಿದರು. ಕಪ್ಪು ಬಣ್ಣದ, ಬಡಕಲು ದೇಹದ ಉದ್ದನೆ ವ್ಯಕ್ತಿಯೊಬ್ಬ ದೀನತೆಯಿಂದ ಕೈ ಮುಗಿದು ನಿಂತಿದ್ದ. ಟಿ ವಿ ವರದಿಗಾರರು ತಮ್ಮ ತಮ್ಮ ಕ್ಯಾಮರಾಮ್ಯಾನ್ ಗಳನ್ನು ಕರೆದರು. ಸುಟ್ಟ ಗುಡಿಸಲಿನ ಭಾಗದಂತೇ ಕಾಣುತ್ತಿದ್ದ ಅಲ್ಲಿನ ಜನರ ಸ್ಥಿತಿಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತಿದ್ದ,ಛಾಯಾಗ್ರಾಹಕರು ಆತನ ಸೌಂಡ್ ಬೈಟ್ ರೆಕಾರ್ಡ್ ಮಾಡಲು ಧಾವಿಸಿ ಬಂದರು.
ಗುಡಿಸಲಿಗೆ ಬೆಂಕಿ ಬಿದ್ದ ಆ ಪ್ರಕರಣವೂ ಇತರ ಎಲ್ಲಾ ದುರಂತಗಳಂತೆ ತಣ್ಣಗಾಗುವುದರಲ್ಲಿತ್ತು.ಅಪಾರ ಪ್ರಮಾಣದ ನಷ್ಟವಾಗಿದ್ದರೂ,ಹೆಚ್ಚಿನ ಸಾವು ನೋವು ಸಂಭವಿಸಿರಲಿಲ್ಲವಾದ್ದರಿಂದ ಸುದ್ದಿಬಾಕ ಮೀಡಿಯಾಗಳಿಗೂ ಪ್ರಕರಣ ಸಪ್ಪೆಯೆನಿಸಿತ್ತು.ಅದರೆ,ಯಾರಿಗೂ ಅರಿವಾಗದಂತೆ ಹುಟ್ಟಿಕೊಂಡಿದ್ದ ಸತ್ಯ ಶೋಧನಾ ಸಮಿತಿ ಇಂದು ಹೊಸ ಸುದ್ದಿಯೊಂದನ್ನು ಸ್ಫೋಟಿಸಿತ್ತು. ಸ್ಲಂ ಪ್ರದೇಶವನ್ನು ಖಾಲಿ ಮಾಡಿಸುವ ಸಲುವಾಗಿ ಲ್ಯಾಂಡ್ ಮಾಫಿಯಾ ಈ ಕೃತ್ಯ ಎಸಗಿದೆ ಎಂದಿತ್ತು. ಸರ್ಕಾರದ ನಿಕಟವರ್ತಿಯೊಬ್ಬನ ಕೈವಾಡವಿದೆ ಎಂಬ ಆರೋಪವನ್ನೂ ಮಾಡಿತ್ತು. ಪರಿಣಾಮ ನಗರದ ಇಡೀ ಮೀಡಿಯಾ ಪ್ರಪಂಚವೇ ಬೂದಿಯೊಳಗೆ ಸುದ್ದಿ ಕೆದಕಲು ಬಂದಿತ್ತು.
ಕ್ಯಾಮರಾ ಮ್ಯಾನ್ ಗಳ ಸಾಹಸ ಮುಂದುವರಿದಿದ್ದರೆ,ಬಹಳ ದಿನಗಳ ನಂತರ ಭೇಟಿಯಾಗಿದ್ದ ವರದಿಗಾರರೆಲ್ಲಾ ಗುಂಪು ಗುಂಪಾಗಿ ಸ್ವಾರಸ್ಯಕರ ಹರಟೆಯಲ್ಲಿ ತೊಡಗಿದ್ದರು. ಸತ್ಯ ಶೋಧನ ಸಮಿತಿಯ ಆಕೆಗೆ, ವರದಿಗಾರರು ತನ್ನ ಸೌಂಡ್ ಬೈಟ್ ಪಡೆಯಲಿಲ್ಲ ಎಂಬ ಬೇಸರವಿದ್ದಂತಿತ್ತು. ಮುಳುಗುತ್ತಿದ್ದ ಸೂರ್ಯನ ಕಿರಣಗಳು ಅಳಿದುಳಿದಿದ್ದ ಗುಡಿಸಲುಗಳ ಪಳೆಯುಳಿಕೆಗಳಿಗೆ ಕೆಂಪು ಬಣ್ಣ ಮೆತ್ತುತ್ತಿತ್ತು.

------------------------
ರಾತ್ರಿ.
ಪುಟ್ಟ ಬೆಚ್ಚನೆ ಗೂಡಿನಲ್ಲಿ ಇದುವರೆಗೆ ಹದುಗಿಕೊಂಡಿದ್ದವರು, ಬೀದಿಗೆ ಬಿದ್ದಿದ್ದಾರೆ.........ಟಿವಿಯಲ್ಲಿ ಪ್ರಣತಿ ಭಾವಪೂರ್ಣವಾಗಿ ವಿವರಣೆ ನೀಡುತ್ತಾ ಇದ್ದಳು.

'ಹೇಗೆ ಕಾಣ್ತಾ ಇದ್ದೀನಿ...'ಪ್ರಣತಿ ಪ್ರಶ್ನೆಗೆ ಸೂರಜ್ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೂ ಸಿಟ್ಟು ಇಳಿದಿಲ್ಲೇನೋ ಎಂದುಕೊಂಡ ಅವನತ್ತ ತಿರುಗಿದಳು. ಸೂರಜ್ ಟಿವಿ ಕಡೆ ಕಣ್ಣು ನೆಟ್ಟು ನೀರು ಕುಡಿಯುತ್ತಿದ್ದ. ಇನ್ನೂ ಒಂದೆರಡು ರೌಂಡ್ ಇಳಿಸಬೇಕು ಎಂಬ ಉತ್ಸಾಹದಲ್ಲಿದ್ದ ಸೂರಜ್ ನನ್ನು ಪಾರ್ಟಿ ಱರಂಭವಾದ ಸ್ವಲ್ಪ ಹೊತ್ತಿಗೇ ಅವಸರ ಅವಸರವಾಗಿ ಕರೆ ತಂದಿದ್ದಳು ಪ್ರಣತಿ. ಪಾಟೀಲ್ ಹೇಳಿದ್ದ 10.00 ಗಂಟೆ ನ್ಯೂಸ್ ನ ಹೈಲೈಟ್ ನಿಂದೇ ಸ್ಟೋರಿ ಅಂತ.

'ಉಹು...ಯಾಕೋ ನಿನ್ನ ಹೊಸ ಹೇರ್ ಸ್ಟೈಲ್ ಸ್ಕ್ರೀನ ನಲ್ಲಿ ಚೆನ್ನಾಗಿ ಕಾಣ್ತಾ ಇಲ್ಲ.' ಸೂರಜ್ ಮಾತು ಪ್ರಣತಿಗೆ ನಿಜ ಅನ್ನಿಸ್ತು. ಈ ಸ್ಟೋರಿಗೆ ಪಿಟಿಸಿ ಕೊಡಬೇಕಾಗುತ್ತೆ ಅಂತಲೇ ಬೆಳಗ್ಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಳು. 'ವೆಂಕಟ್ ಗೆ ಹೇಳಿದ್ದೆ ಅಷ್ಟು ಕ್ಲೋಸ್ ಅಪ್ ಬೇಡ ದಪ್ಪ ಕಾಣ್ತೀನಿ ಅಂತ. ಛೇ ಸರಿಯಾಗಿ ಬಂದಿಲ್ಲ...' ಅಂದು ಕೊಂಡಳು.
'ನಿನ್ನ ಹಿಂದೆ ಬ್ಯಾಕ್ ಡ್ರಾಪ್ ನಲ್ಲಿ ಕಾಣ್ತಾ ಇರೋ ಜನ ಎಷ್ಟು ಆರ್ಟಿಫಿಷಿಯಲ್ ಆಗಿ ಅಳ್ತಾ ಇದ್ದಾರೆ ನೋಡು' ಸೂರಜ್ ಹೇಳಿದ.
ಪ್ರಣತಿ ಘಟನೆಯ ಬಗ್ಗೆ ವಿವರಣೆ ನೀಡುವಾಗ ಫ್ರೇಮ್ ನಲ್ಲಿ ಹಿಂದುಗಡೆ ಏನು ಇರಬೇಕೆಂದು ವೆಂಕಟ್ ಸಾಕಷ್ಟು ತಲೆ ಕೆಡಿಸಿಕೊಂಡು ಬಳಿಕ ಬೀದಿಪಾಲದ ಜನ ಅಳುತ್ತಾ ಇದ್ದರೆ ಫ್ರೇಮ್ ತುಂಬಾ ಚೆನ್ನಾಗಿರುತ್ತೆ ಎಂದಿದ್ದ. ಅಲ್ಲಿದ್ದವರನ್ನೆಲ್ಲಾ ಸೇರಿಸಿ ಇವಳ ಹಿಂದೆ ಗೋಳಾಡುತ್ತಾ ನಿಲ್ಲುವಂತೆ ಹೇಳಿದ್ದ. ಯಾರಿಗೂ ಅಳು ಬರುತ್ತಿರಲಿಲ್ಲವಾದ್ದರಿಂದ ಅಳುವಂತೆ ನಟಿಸುತ್ತಾ ಕ್ಯಾಮರಾವನ್ನೇ ನೋಡಲಾರಂಭಿಸಿದ್ದರು. ವೆಂಕಟ್ ಸಾಕಷ್ಟು ಹೇಳಿ, ಹಲವು ಬಾರಿ ಟೇಕ್ ತಗೊಂಡು ಕೊನೆಗೆ ಒ ಕೆ ಎಂದಿದ್ದ. ಈಗ ನೀಡಿದ್ರೆ ಅಳುತ್ತಾ ನಿಂತವರೆಲ್ಲಾ ಕ್ಯಾಮೆರಾಗಾಗಿಯೇ ಅಳುತ್ತಿರುವಂತೆ ಅನಿಸುತ್ತಿತ್ತು. ಪ್ರಣತಿಗೆ ಚಿಕ್ಕದಾಗಿ ಆತಂಕ ಶುರುವಾಯ್ತು. ಕಳೆದ ಬಾರಿ ಹೂಚ್ ಟ್ರಾಜಿಡಿ ಸರಿಯಾಗಿ ಕವರ್ ಮಾಡಲಿಲ್ಲ ಅಂತ ಪಾಟೀಲ್ ಗುರುಗುಟ್ಟಿದ್ದ. ಬೇರೆ ಛಾನಲ್ ಗಳನ್ನು ನೋಡಿ, ಕುಟುಂಬವನ್ನು ಕಳೆದುಕೊಂಡು ಅಳುತ್ತಾ ಇರುವವರ ಬೈಟ್ ತಂದೇ ಇಲ್ಲ ಎಂದು ಎಗರಾಡಿದ್ದ. ದುರಂತಗಳ ವರದಿ ನೋಡ್ತಾ ಇದ್ದರೆ ಜನ ಕಣ್ಣೀರು ಸುರಿಸಬೇಕು ಗೊತ್ತಾ ಎಂದು ಮೂದಲಿಸಿದ್ದ. ಅದಕ್ಕಾಗಿಯೇ ಈ ಬಾರಿ ಪ್ರಣತಿ ವಿಶೇಷ ಕಾಳಜಿ ವಹಿಸಿದ್ದಳು. ಈಗ ನೋಡಿದ್ರೆ ಬರೀ ತಪ್ಪುಗಳೇ ಕಣ್ಣಿಗೆ ಬೀಳ್ತಾ ಇದೆ. ರಿಪೋರ್ಟ್ ಮುಗಿಯುತ್ತಿದ್ದಂತೆ ಬೇರೇನೂ ನೋಡೋ ಮನಸ್ಸಿಲ್ಲದೆ ಪ್ರಣತಿ ಟಿವಿ ಆರಿಸುವುದಕ್ಕೂ, ಮೊಬೈಲ್ ಸದ್ದು ಮಾಡುತ್ತಾ ಸಂದೇಶ ಬಂದಿದೆ ಎಂಬ ಮಾಹಿತಿ ನೀಡುವುದಕ್ಕೂ ಸರಿ ಹೋಯಿತು.
'ಹೋ, ಫೋನ್ ಮಾಡಿ ಉಗಿಯೋ ಬದಲು ಪಾಟೀಲ್ ಮೆಸೇಜ್ ಕಳಿಸಿದ್ದಾನೆ. ನಾಳೆ ಆಫೀಸಲ್ಲಿ ಇದೆ ಹಬ್ಬ' ಎಂದುಕೊಂಡು ಬೇಸರದಿಂದಲೇ ಮೊಬೈಲ್ ಕೈಗೆತ್ತಿಕೊಂಡ ಪ್ರಣತಿಗೆ ಆಶ್ಚರ್ಯವಾಯ್ತು. 'ನೈಸ್ ರಿಪೋರ್ಟ್. ವೆರೀ ಮಚ್ ಟಚಿಂಗ್. ಗುಡ್ ಎಂದಿತ್ತು.' ಪ್ರಣತಿಯ ಎಲ್ಲಾ ಆತಂಕ ಕ್ಷಣಾರ್ಧದಲ್ಲೇ ಕರಗಿತು.

-----------------------------
ಸುಟ್ಟು ಹೋಗಿದ್ದ ಆ ಕೊಳೆಗೇರಿಯ ಪಕ್ಕದ ಸಾರಾಯಿ ಅಂಗಡಿಯಲ್ಲಿ ನಿತ್ಯದಷ್ಟು ಜನ ಇರಲಿಲ್ಲ. ಮನೆ ಕಳೆದುಕೊಂಡಿದ್ದ ಹಲವರು ಬೇರೆ ಆಶ್ರಯ ಹುಡುಕಿ ಹೊರಟಿದ್ದರು. ಇನ್ನೂ ಕೆಲವರು ತಲೆಯ ಮೇಲಿನ ಸೂರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಬೆಟ್ಟಪ್ಪ ಯಾಕೋ ಸ್ವಲ್ಪ ಹೆಚ್ಚೇ ಭಾವಾವೇಷದಲ್ಲಿದ್ದ. ದುಖದಲ್ಲಿದ್ದ. 'ಏನ್ಲಾ ಹಿಂಗಾಯ್ತು ಕೆಂಚ,ಗುಂಡು ಹಾಕಿದ್ ಮೇಲೆ ಮೊನ್ನೆ ಸುಮ್ನೆ ಮನೆ ಕಡೆ ಹೋಗಿದ್ರೆ ಇಷ್ಟೆಲ್ಲಾ ಆಯ್ತಿತ್ತಾ,ಅಲ್ಲಿ ಹಟ್ಟಿ ತಾವ ಅಲ್ಯಾರನ್ನಾ ಬೈಯ್ತಾ ಕುಂತ್ಕೊಂಡೆ...ಅಲ್ಲೇ ಬೀಡಿ ಸೇದಿ ಒಗಾಸ್ದೋ . ನೋಡ್ಲಾ ಹೆಂಗಾಗೋಯ್ತು...'ಬೆಟ್ಟಪ್ಪ ಕುಡಿದ ಅಮಲಲ್ಲಿ ಗೋಳಾಡತೊಡಗಿದ.
'ಲೇ ಸುಮ್ಕಿರ್ಲಾ...ಯಾರಾದ್ರೋ ಕೇಳಿಸ್ಕೊಂಡ್ರೆ ಅಷ್ಟೇಯಾ ಜೈಲಿಗೆ ಹೋಗ್ಬೇಕಾಯ್ತದೆ. ಅದರಲ್ಲೂ ಯಾರೋ ಬಂದು ಬೆಂಕಿ ಹಾಕಿದ್ದೂ ನೋಡಿದೀವಿ ಅಂತ ಬೇರೆ ಸುಳ್ಳು ಹೇಳಿದೀವಿ.' ಕೆಂಚ ಬೆಟ್ಟಪ್ಪನ್ನ ಬಾಯಿ ಮುಚ್ಚಿ ಪಿಸುಗುಟ್ಟಿದ.
'ಅಲ್ಲಿ ಪೊದೆಗೆ ಬೆಂಕಿ ಹೊತ್ಕೊಂಡ್ರೂ ನಾವು ಸುಮ್ನೆ ಕಣ್ಣುಮುಚ್ಕೊಂಡು ಹೋಗಿದ್ದು ತಪ್ಪು ಕಣ್ಲಾ...ಬೆಂಕಿ ಇಷ್ಟು ದೊಡ್ದಾಗಿ ಸುಟ್ಟು ಹಾಕ್ ಬಿಡ್ತಾದೇ ಅನ್ ಕಂಡಿರಲಿಲ್ಲಾ ಕೆಂಚ...'ಬೆಟ್ಟಪ್ಪನ್ನ ಗೋಳಾಟ ಮುಂದುವರಿದೇ ಇತ್ತು.

-------------------------------
ಮಧ್ಯರಾತ್ರಿ
'ಮಿನಿಸ್ಚ್ರು ರೆಡ್ಡಿ ಹತ್ರ ಮಾತಾಡಿದ್ಯಾ....' ಟಿವಿಯಲ್ಲಿ ಬರುತ್ತಿದ್ದ ಯಾವುದೋ ರೊಮ್ಯಾಂಟಿಕ್ ಮೂವಿಯಲ್ಲಿ ಮುಳುಗಿದ್ದ ಪ್ರಣತಿ, ಸೂರಜ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ.
'ನೀನು ಮಾತಾಡ್ದೇ ಇದ್ರೆ, ಕಷ್ಟ ಆಗುತ್ತೆ ಪ್ರಣತಿ. ಎಲ್ಲಾ ಕಡೆ ಗ್ಲೋಬಲ್ ರೆಸೆಷನ್ ಅಂತಿದ್ರೂ ನಮ್ಮ ಬಾಸ್ ನನಗೆ ಡಬಲ್ ಪ್ರಮೋಶನ್ ಕೊಡೋಕೆ ರೆಡಿ ಇದಾರೆ. ಈ ಕಾಂಟ್ರಾಕ್ಟ್ ಒಂದು ನಮ್ಮ ಕಂಪನಿಗೆ ಸಿಗಬೇಕು ಅಷ್ಟೆ. ರೆಡ್ಡಿ ನಿನ್ನ ಮಾತು ತೆಗೆದು ಹಾಕಲ್ಲ. ಇಲ್ಲ, ಅಂದ್ರೆ ನೀನು ಬಹಳ ಇಷ್ಟ ಪಟ್ಟಿರೋ ಆ ಫಾರ್ಮ ಹೌಸ್ ಕೊಂಡ್ಕೋಳ್ಳೋದು ಸಾಧ್ಯನೇ ಇಲ್ಲ. ಮರೆತು ಬಿಡು.' ಕಳೆದ ಒಂದು ವಾರದಿಂದ ಸೂರಜ್ ಕೇಳುತ್ತಲೇ ಇದ್ದ. ಪ್ರಣತಿ ಯಾಕೋ ರೆಡ್ಡಿಯನ್ನು ಕೇಳಲು ಹಿಂಜರಿದಿದ್ದಳು.
'ಖಂಡಿತಾ ನಾಳೆ ಮಾತಾಡ್ಲೇ ಬೇಕು. ರೆಡ್ಡಿಗೆ ತಾನು ಎಷ್ಟು ಬಾರಿ ಪಬ್ಲಿಸಿಟಿ ಕೊಟ್ಟಿಲ್ಲ.ಹಿಂಜರಿಕೆ ಯಾಕೆ. ತಾನು ಯಾರಿಗೂ ಅನ್ಯಾಯ ಮಾಡ್ತಾ ಇಲ್ವಲ್ಲಾ.' ಪ್ರಣತಿ ತನಗೆ ತಾನೇ ಸಮರ್ಥನೆ ಕೊಟ್ಟುಕೊಂಡಳು.
ಅಗಲೇ, ಫೋನ್ ರಿಂಗಾಯ್ತು...ನಂಬರ್ ನೋಡಿದವಳೇ ಬೇಸರದಿಂದ ಫೋನ್ ಕಟ್ ಮಾಡಿದ್ಲು. 'ಯಾರದ್ದು...'ಸೂರಜ್ ಕೇಳಿದ.
'ಅದೇ ಗುಡಿಸಲಿನ ಜನ. ಇವತ್ತು ಹೋಗಿದ್ದೆನಲ್ಲಾ, ಏನಾದ್ರೋ ಇನ್ಫರ್ಮೇಶನ್ ಕೊಡಬಹುದು ಅಂತ ಫೋನ್ ನಂಬರ್ ಕೊಟ್ಟೆ. ಈಗ ನೋಡಿದ್ರೆ ಅವನ ಮಗ ಯಾರೋ ಎಸ್ ಎಸ್ ಎಲ್ ಸಿ ನಲ್ಲಿ 70 ಪರ್ಸೆಂಟ್ ತಗೊಂಡಿದಾನಂತೆ. ಆ ಇಡೀ ಕೊಳೆಗೇರಿಯಲ್ಲಿ ಇದುವರೆಗೆ ಅವನಷ್ಟು ಮಾರ್ಕ್ಸ್ ಯಾರೂ ತಗೊಂಡೇ ಇಲ್ವಂತೆ. ಒಳ್ಳೇ ಕಾಲೇಜಲ್ಲಿ ಸೀಟು ಕೊಡ್ಸಿ,. ಮಿನಿಸ್ಚ್ರ ಹತ್ರ ಹೇಳಿ ಹಣದ ಸಹಾಯ ಮಾಡ್ಸಿ ಅಂತಾ ಒಂದೇ ಸಮನೆ ಪಕ್ಕದ ಕಾಯಿನ್ ಬೂತ್ ನಿಂದ ಫೋನ್ ಮಾಡ್ತಾ ಇದ್ದಾನೆ. ಮಿನಿಸ್ಟ್ರ ಹತ್ರ ಇದೆಲ್ಲಾ ಕೇಳೋದು ಏನು ಚೆನ್ನಾಗಿರುತ್ತೆ ಹೇಳಿ...'ಪ್ರಣತಿ ಬೇಸರದಿಂದ ನುಡಿದಳು.
ಮೊಬೈಲ್ ಸ್ವಿಚ್ ಆಫ್ ಮಾಡಿದವಳೆ...'ನಡೀ ಸೂರಜ್ ಮಲ್ಕೊಳ್ಳೋಣ, I am very much tierd. ನಾಳೆ ಖಂಡಿತಾ ರೆಡ್ಡಿ ಆಫೀಸಿಗೆ ಹೋಗ್ತೀನಿ' ಎಂದು ಎದ್ದು ನಿಂತಳು.
-------------------------------
"ನಾನು ಹೇಳುವುದೆಲ್ಲಾ ಸತ್ಯ" ಹೆಸರಿನಲ್ಲಿ ಪ್ರಕಟಗೊಂಡಿದೆ. 

Friday, May 30, 2008

ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ

ಇದೊಂದು ಜೋಕ್.....ಕಾಲೇಜಿನ ದಿನಗಳಲ್ಲಿ ನಮ್ಮ ಮ್ಯಾಥ್ಸ್ ಲೆಕ್ಚರರ್ ಹೇಳುತಿದ್ದ ಜೋಕ್....
ಒಬ್ಬ ಸೈಂಟಿಸ್ಟ್ ಬಳಿ ಒಂದು ಕಪ್ಪೆ ಇತ್ತಂತೆ. ಅದು ಅವನು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿತ್ತು. ಒಂದು ಸಲ ಸೈಂಟಿಸ್ಟ ಇದೇ ಕಪ್ಪೆ ಮೇಲೇ ಪ್ರಯೋಗ ನಡೆಸಲು ಮುಂದಾದ. ಕಪ್ಪೆಯ ಒಂದು ಕಾಲು ಕಟ್ ಮಾಡಿ ಹಾರು ಎಂದ. ಕಪ್ಪೆ ಹಾರಿತು. ಎರಡನೇ ಕಾಲು ಕಟ್ ಮಾಡಿ ಹಾರು ಎಂದಾಗ ಕಷ್ಟ ಪಟ್ಟು ಹಾರಿತು. ಮೂರನೇ ಕಾಲು ಕಟ್ ಮಾಡಿ ಹಾರು ಎಂದಾಗ ತನ್ನೆಲ್ಲಾ ಶಕ್ತಿ ಬಳಸಿ ಹಾರಿತು. ಕೊನೆಗೆ ನಾಲ್ಕನೇ ಕಾಲೂ ಕಟ್ ಮಾಡಿ ಹಾರು ಎಂದಾಗ ಮಾತ್ರ ಅದಕ್ಕೆ ಹಾರೋಕೆ ಸಾಧ್ಯವಾಗಲಿಲ್ಲ. ಆಗ ಸೈಂಟಿಸ್ಟ್ ತನ್ನ ನೋಟ್ ಬಕ್
ನಲ್ಲಿ ಬರೆದು ಕೊಂಡ....
.....ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ....

ಕಾಲೇಜಿನ ಆ ದಿನಗಳಲ್ಲಿ ನನಗೆ ಬಹಳ ಇಷ್ಟವಾದ ಜೋಕ್ ಇದು. ನೀವೂ ಕೇಳಿರ್ತೀರಾ...ಮೊನ್ನೆ ಸುಮ್ನೆ ನಡೆದು ಹೋಗ್ತಾ ಇದ್ದಾಗ,ಈ ಜೋಕ್ ಮೆಲುಕು ಹಾಕ್ತಾ ಇದ್ದೆ. ಜೀವನದ ಸತ್ಯ ಹೇಳುತ್ತಿದೆ ಅನಿಸಿತು.ಇತ್ತೀಚೆಗೆ ದಿನಾ ತಡರಾತ್ರಿ ಬರುತ್ತಿರುವ ಗಂಡನ ಕಿಸೆಯಲ್ಲಿ ದೊರೆತ ತರುಣಿಯ ಫೋಟೋ, ಪ್ರತಿದಿನ ಮನೆಯಿಂದ ಹೊರಗೆ ಕಾಲಿಟ್ಟಾಗಲೇ ತನ್ನ ಮನೆ ಗೇಟು ತೆರೆದು ನಿಲ್ಲುವ ಕನ್ನಡಕದ ಹುಡುಗ, ಮನೆಯಲ್ಲಿ ಕಳ್ಳತನವಾದ ದಿನದಿಂದಲೇ ಹೇಳದ ಕೇಳದೆ ಕೆಲಸಕ್ಕೆ ಚಕ್ಕರ್ ಕೊಟ್ಟ ಕೆಲಸದಾಕೆ, ಇವರೆಲ್ಲಾ ಒಂದೊಂದು ಕಥೆ ಹೇಳುತ್ತಾರೆ. ಒಂದಕ್ಕೂ ಮತ್ತೊಂದಕ್ಕೂ ಯಾವುದೋ ರೀತಿ ತಾಳೆಯಾಗುತ್ತೆ. ಲೆಕ್ಕಾಚಾರ ಸರಿ ಹೋಗುತ್ತೆ. ಅದೇ ನಿಜ ಅನ್ನಿಸುತ್ತೆ. 3+4 ಕೂಡ 7, 5+2 ಕೂಡ 7 ಎಂಬುದು ಮರೆತು ಹೋಗುತ್ತೆ. ಈ ತಪ್ಪು ವಿಶ್ಲೇಷಣೆಗಳು ಬದುಕಿನ ಹಾದಿಯನ್ನೇ ತಪ್ಪಿಸಿದ್ದನ್ನು ಕಂಡಿದ್ದೀನಿ. ಕಪ್ಪೆಗೆ ನಾಲ್ಕೂ ಕಾಲು ಕಟ್ ಮಾಡಿದಾಗ ಅದು ಹಾರದಿರುವುದಕ್ಕೆ ಕಿವಿ ಕೇಳದಿರುವುದು ಕಾರಣವಲ್ಲ, ಕಾಲಿಲ್ಲದಿರುವುದು ಕಾರಣ ಎಂದು ಅರಿವಾಗುವುದರೊಳಗೆ ಬದುಕು ಹಾದಿ ತಪ್ಪಿರೊತ್ತೆ. ಅಲ್ವಾ.........

Monday, May 19, 2008

ಅಮ್ಮ ಮಾತಾಡ್ಲಿಲ್ಲ.........

ಕಳೆದ ಮೂರು ದಿನಗಳಿಂದ ಮನೆಯಲ್ಲಿ ದುಸುಮುಸು.... ಎಲ್ಲವೂ ಸರಿಯಿಲ್ಲ ಎಂಬ ಭಾವ...ಎಷ್ಟು ಬೇಕೋ ಅಷ್ಟೇ ಮಾತುಕತೆ. ಮಗಳಿಗಂತೂ ಚಿಕ್ಕ ಪುಟ್ಟ ವಿಷಯಕ್ಕೂ ಕಣ್ಣಂಚಲ್ಲೇ ನೀರು. ನಾನು ಏನು ಮಹಾ ಕೇಳಿದ್ದು....ಮಂಡಿ ಕಾಣೋ ಮಿನಿ ಸ್ಕರ್ಟ್ ಹಾಕೋತೀನಿ ಅಂದ್ನಾ....ಮೈಮಾಟ ತೋರೋ ಟೈಟ್ ಟೀ ಶರ್ಟ್ ಬೇಕು ಅಂದ್ನಾ...ನನ್ನ ಇಷ್ಟು ಚಿಕ್ಕ ಆಸೆಗೆ ಬೇಡ ಅಂತಾ ಹಠ ಹಿಡಿದಿರೋ ಈ ಅಮ್ಮಒಳ್ಳೇ 18ನೇ ಶತಮಾನದಲ್ಲಿ ಬದುಕುತ್ತಿರೋ ತರಾ ಆಡ್ತಾಳಲ್ಲ.ಮೂರು ದಿನದ ಹಿಂದಿನ ಮಾತು-ಜಗಳ ನೆನಪಾಗಿ ಮತ್ತೆ ಮಗಳ ಕಣ್ಣಂಚಲ್ಲಿ ಮುತ್ತು ಸುರಿಯಿತು.
ಮೊನ್ನೆ ತಾನೇ ಕಾಲೇಜಿನ ಬಣ್ಣದ ಲೋಕ ಪ್ರವೇಶಿಸಿದ್ದ ಹುಡುಗಿ ಅಲ್ಲಿನ ರಂಗು ನೋಡಿ ದಂಗಾಗಿದ್ದು ಸುಳ್ಳಲ್ಲ. ಮೊನ್ನೆವರೆಗೂ,ನೀಟಾಗಿ ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದ, ಚೆನ್ನಾಗಿ ಡ್ರೆಸ್ ಮಾಡ್ಕೋಳ್ಳೋದು ಯಾವುದಾದರೋ ಮದುವೆ ಇದ್ದಾಗ ಅದ್ಕೊಂಡಿದ್ದ ಹುಡುಗಿಗೆ ಕಾಲೇಜಿನ ವಸ್ತ್ರ ವೈಭವ ಭ್ರಮೆ ಹುಟ್ಟಿಸಿತ್ತು.ಎರಡು ದಿನ ಕಾಲೇಜಿಗೆ ಹೋಗಿ ಬಂದವಳೇ ತನ್ನಲ್ಲಿರುವ ವಸ್ತ್ರ ಭಂಡಾರ ತೀರಾ ಚಿಕ್ಕದು ಮತ್ತು ಔಟ್ ಡೆಟೆಡ್ ಅನ್ನಿಸಿ, ಅಂದೇ ಅಪ್ಪನನ್ನು ಹೊರಡಿಸಿ ತನಗೆ ಬೇಕಾದ ಬಣ್ಣ ಬಣ್ಣದ ಸಲ್ವಾರ್ ಸೂಟ್,ಕುರ್ತಾ, ಜೀನ್ಸ್ ಕೊಂಡಿದ್ದಳು. ಆದರೆ, ಹೊಸದಾಗಿ ತಂದ ಜೀನ್ಸ್ ತೊಟ್ಟು ಕಾಲೇಜಿಗೆ ಹೊರಟು ನಿಂತಾಗ ಮಾತ್ರ ಯಾಕೋ ಎಲ್ಲಾ ಸರಿಯಿಲ್ಲ ಅನ್ನಿಸಿತ್ತು. ಕಾಲೇಜು ತಲುಪಿದ ಮೇಲಂತೂ ನನ್ನ ಜೀನ್ಸ್ ಗೆ ಉದ್ದನೇ ಕೂದಲೂ ಯಾವ ರೀತಿ ನೋಡಿದ್ರೂ ಹೊಂದುತ್ತಿಲ್ಲ ಅನ್ನಿಸಿತ್ತು.

ಇದುವರೆಗೆ ಉದ್ದನೆ ಕೂದಲನ್ನು ಎರಡಾಗಿ ಸೀಳಿ ಜಡೆ ಹೆಣೆದು ಅದನ್ನು ಮಡಿಸಿ ಅಮ್ಮ ರಿಬ್ಬನ್ ಬಿಗಿದರೆ ನಾಳಿನವರೆಗೂ ಅದು ಭದ್ರ. ಎಷ್ಟು ಉದ್ದ ಕೂದ್ಲೇ ನಿಂದು ಚೆನ್ನಾಗಿದೆ ಅಂತ ಯಾರಾದ್ರೋ ಹೇಳಿದ್ರೆ ಮನೆಗೆ ಬಂದು ಕನ್ನಡಿ ಮುಂದೆ ನಿಂತು ಕೂದಲು ಸವರುತ್ತಿದ್ದ ಹುಡುಗಿಗೆ ತನ್ನ ಕೂದಲ ಕುರಿತು ಸಾಕಷ್ಟು ಹೆಮ್ಮೇನೇ ಇತ್ತು. ಆದರೆ,ಈಗ, ಮೊದಲು ಜೀನ್ಸ್ ಹಾಕಿದಾಗ ಯಾವತ್ತೂ ಅನ್ನಿಸಿರದಿದ್ದ ಭಾವ ಹುಡುಗಿಯನ್ನ ಕಾಡಿ, ಹತ್ತಾರು ಬಾರಿ ಲೇಡಿಸ್ ರೂಮ್ ಗೆ ನುಗ್ಗಿ ಕನ್ನಡಿ ಮುಂದೆ ನಿಲ್ಲುವಂತೆ ಮಾಡಿತ್ತು. ಜೀನ್ಸ್ ಜೊತೆ ಸೊಂಟ ಮುಟ್ಟುವ ಬಿಗಿಯಾಗಿ ಹೆಣೆದ ಉದ್ದನೇ ಜಡೆ....ಯಾಕೋ ತೀರಾ ಹಳ್ಳಿ ಗಮಾರಿ ಥರಾ ಅನ್ನಿಸಿದ್ದೇ , ಹಡುಗಿ ಹೇರ್ ಕಟ್ ಮಾಡಿಸೋ ನಿರ್ಧಾರಕ್ಕೆ ಬಂದು ಬಿಟ್ಲು.

ಯಾಕೋ ನಿಂದು ತೀರಾ ಅತಿ ಆಯ್ತು ಕಣೇ. ಹೊಸ ಡ್ರೆಸ್ ಬೇಕು ಅಂದೆ, ಬೇರೆ ವಾಚ್ ಬೇಕು ಅಂದೆ, ಸ್ಕೂಟಿ ಕೊಡ್ಸಿ ಅಂತಾ ಆಗ್ಲೆ ಡಿಮ್ಯಾಂಡ್ ಇಟ್ಟಿದ್ದೀಯಾ.ಈಗ ನೋಡಿದ್ರೆ ಕೂದ್ಲು ಕಟ್ ಮಾಡಿಸ್ತಾಳಂತೆ. ನೀನೇನು ಕಾಲೇಜಿಗೆ ಶೋಕಿ ಮಾಡೋಕೆ ಹೋಗ್ತೀಯೋ ಓದೋಕೋ.... ಅಮ್ಮನಿಂದ ತೀವ್ರ ವಿರೋಧ ವ್ಯಕ್ತವಾದಾಗ, ಹುಡುಗಿಯೂ ಹಟಕ್ಕೆ ಬಿದ್ದಳು. ಊಟಿ ತಿಂಡಿ ಕಡಿಮೆ ಆಯ್ತು, ಮಾತಂತೂ ಇಲ್ಲವೇ ಇಲ್ಲ ಅನ್ನುವಷ್ಟು ಚಿಕ್ಕದಾಯಿತು. ನಗು ನಿಂತೇ ಹೋಯ್ತು. ಹಠ ಬಿಡದ ಅಮ್ಮ ಮಗಳ ಮೌನ ಕೆದಕದೆ ಹಾಗೇ ಬಿಟ್ಟರು. ಮೂರನೇ ದಿನ ಮಾತ್ರ ರಾತ್ರಿ ಊಟಕ್ಕೆ ಕೂತಾಗ ಅನ್ನ ತಿನ್ನದೇ ತಟ್ಟೆ ಕೆದಕುತ್ತಾ ಕೂತಿದ್ದವಳನ್ನು ಕಂಡು ಅಮ್ಮ, ಸರಿ ನಿನ್ನಿಷ್ಟ ಏನೂ ಬೇಕಾದ್ರೂ ಮಾಡ್ಕೋ ಅಂದಿದ್ದೇ ಹುಡುಗಿಗೆ ಗೆದ್ದ ಭಾವ. ಅರಿವಿಲ್ಲದಂತೆ ಮೊಗದಲ್ಲಿ ಅರಳಿದ ನಗೆ ಮಲ್ಲಿಗೆ.

ಮಾರನೇ ದಿನ ಕಾಲೇಜಿನಲ್ಲಿ ಹೊಸ ಫ್ರೆಂಡ್ಸಗಳನ್ನೆಲ್ಲಾ ಕೇಳಿ ಹೇರ್ ಕಟ್ ಶೈಲಿಯನ್ನ ಮನದಲ್ಲೇ ಸಿದ್ದಪಡಿಸಿಕೊಂಡಳು. ದಿನಾ ಒಂದಷ್ಟು ಪೌಡರ್ ಮೆತ್ತಿಕೊಂಡು ಮೇಕಪ್ ಆಯ್ತು ಅಂದ್ಕೋಳ್ಳೋ ಅಮ್ಮನಿಗೇನು ಗೊತ್ತು, ಅಂದು ಕೊಂಡೇ ಪಕ್ಕದ ಮನೆ ಆಂಟಿ ಹತ್ರ ಬ್ಯೂಟಿ ಪಾರ್ಲರ್ ಮಾಹಿತಿ ಕಲೆ ಹಾಕಿದಳು. ಸಂಜೆ ಅಮ್ಮನ ಜೊತೆ, ಬ್ಯೂಟಿ ಪಾರ್ಲರ್ ಪ್ರವೇಶಿಸಿದಳೇ, ಅಲ್ಲಿದ್ದ ಹುಡುಗಿ ಮುಖದಲ್ಲಿ ಮೂಡಿದ್ದ ಪ್ರಶ್ನೆಗೆ ಹೇರ್ ಕಟ್ ಅಂತ ಹೆಮ್ಮೆಯಿಂದಲೇ ಉತ್ತರಿಸಿ ಸರದಿಗಾಗಿ ಕಾದು ಕುಳಿತಳು. ಅಮ್ಮ ಅಲ್ಲೇ ಇದ್ದ ಕಳೆದ ವರ್ಷದ ಯಾವುದೋ ವಿಮೆನ್ ಮ್ಯಾಗಝಿನ್ ಹಿಡಿದು ಕುಳಿತಾಗ ತನ್ನ ಹೊಸ ಲುಕ್ಸ ಹೇಗಿರಬಹುದು ಅಂತಾ ಕನಸು ಕಂಗಳಲ್ಲಿ ರಂಗವಲ್ಲಿ ಬರೆದಳು.

ಪಾರ್ಲರ್ ಹುಡುಗಿ ಯಾರದೋ ಹುಬ್ಬು ಕೆತ್ತಿ, ಇನ್ಯಾರದೋ ಮುಖಕ್ಕೆ ಮತ್ತೇನೂ ಮೆತ್ತಿ ಬನ್ನಿ ಅಂದಾಗ ಮಾತ್ರ ಯಾಕೋ ಹುಡುಗಿ ಮಂಕಾದಳು. ಬಲಿ ಪೀಠ ಏರುವಂತೆ ಎತ್ತರದ ಕುರ್ಚಿ ಏರಿ ಕುಳಿತಳು. ಯಾವ ಕಟ್ ಎಂಬ ಪ್ರಶ್ನಗೆ ಅಸ್ಪಷ್ಟವಾಗಿ ಗೊಣಗಿದಳು. ಸಸ್ ಸಸ್ ಅಂತ ಕೂದಲ ತುಂಬಾ ಸ್ಪ್ರೇ ಮಾಡಿದ ಬ್ಯೂಟೀಶಿಯನ್ ಕೂದಲನ್ನು ಒಮ್ಮೆ ಎತ್ತಿ ಹಿಡಿದವಳೇ ಮೂರು ದಿನಗಳ ಬೇಗುದಿ ಅರಿತಂತೆ ಇಷ್ಟು ಕೂದಲು ಬೆಳೆಸೋಕೆ ನಿಮ್ಮ ಅಮ್ಮ ಎಷ್ಚು ವರ್ಷ ಕಷ್ಟ ಪಟ್ಟಿರ್ತಾರೆ ಗೊತ್ತಾ ನನಗೇನೂ ನಿಮಿಷಕ್ಕೆ ಕಟ್ ಮಾಡಿ ಬಿಸಾಕ್ತೀನಿ ಎಂದಳು. ಈ ಹೇಳಿಕೆಗೇ ಕಾದಿದ್ದಂತೇ ಹುಡುಗಿ ಕಣ್ಣು ಹನಿಗೂಡಿತು. ದೇವರೇ ಅಮ್ಮ ಈಗ ಒಂದೇ ಸಾರಿ ಕಟ್ ಮಾಡಿಸಬೇಡ ಕಣೇ ಅನ್ನಲಿ ಈ ಪೀಠದಿಂದ ಕೆಳಗಿ ಇಳೀತೀನಿ ಅಂದುಕೊಂಡಳು. ಅಮ್ಮ ಮಾತೇ ಮರೆತಂತೆ ಸುಮ್ಮನಿದ್ದಳು. ಕತ್ತರಿ ನಡುವೆ ಸಿಲುಕಿದ್ದ ಹುಡುಗಿಯ ಕೂಡಲು ಕಸಕ್ ಶಬ್ದದೊಂದಿಗೆ ಕಳಚಿ ನೆಲಕ್ಕೆ ಬಿತ್ತು.....ಜೊತೆಗೆ,ಹುಡುಗಿಯ ಕಣ್ಣಲ್ಲಿ ಮಡುಗಟ್ಟಿದ್ದ ಹನಿ....